ಬೆಂಗಳೂರು, ಮಾ.31- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 98ಕ್ಕೆ ತಲುಪಿದ್ದು, ಶತಕದ ಗಡಿಯಲ್ಲಿದೆ. ಈ ನಡುವೆ ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆಯವರೆಗೆ ಹೊಸದಾಗಿ 10 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಆರೋಗ್ಯ ಇಲಾಖೆ ಹೊರಡಿಸಿರುವ ಬುಲೇಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ನಿನ್ನೆ ಸಂಜೆಯವರೆಗೆ 88 ಮಂದಿ ಸೋಂಕಿತರಿದ್ದರು, ಅಲ್ಲಿಂದ ಇಂದಿನ ವರೆಗೆ 98 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೆ ಮೂರು ಮಂದಿ ಸಾವನ್ನಪ್ಪಿದ್ದರೆ ಆರು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಹೊಸದಾಗಿ ಪತ್ತೆಯಾದ ಪೈಕಿ ಮೂರು ಮಂದಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರಾಗಿದ್ದಾರೆ. 89ನೇ ಸಂಖ್ಯೆಯ ರೋಗಿ 52 ವರ್ಷದವರು, ಪಿ 90 ಸಂಖ್ಯೆಯ ರೋಗಿ 48 ವರ್ಷದ ಮಹಿಳೆ, ಪಿ.91 ಸಂಖ್ಯೆಯ ರೋಗಿ 26 ವರ್ಷದ ಯುವತಿಯಾಗಿದ್ದಾರೆ. ಈ ಮೂವರು ಮಾರ್ಚ್ 16ರಂದು ಬೆಂಗಳೂರಿಗೆ ಪ್ರವಾಸ ಕೈಗೊಂಡಿದ್ದರು. ಹಾದಿ ಮಧ್ಯೆ ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳದಲ್ಲಿ ಸೋಂಕು ತಗುಲಿರುವ ಶಂಕೆಯಿದೆ.
ಪಿ 92 ಸೋಂಕಿತರು 40 ವರ್ಷದ ಪುರುಷರಾಗಿದ್ದು, ಪಿ 59 ಸಂಖ್ಯೆ ಸೋಂಕಿತರ ಜೊತೆಗಿನ ಸಂಪರ್ಕದಿಂದ ಕೊರೊನಾ ಅಂಟಿಸಿಕೊಂಡಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ಸಿಟಿಗೆ ತೆರಳಿ ಮಾ 22ರಂದು ಬೆಂಗಳೂರಿಗೆ ವಾಪಾಸ್ ಬಂದಿದ್ದ ಬೆಂಗಳೂರಿನ 19 ವರ್ಷದ ಯುವಕನಿಗೂ ಸೋಂಕು ತಗುಲಿದ್ದು ಆತನನ್ನು ಪಿ 93 ಎಂದು ಗುರುತಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕು ಗೌರಿಬಿದನೂರು ತಾಲ್ಲೂಕಿನಲ್ಲಿ ಒಬ್ಬ ಮಹಿಳೆ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಅದರ ಬೆನ್ನಲ್ಲೇ ಆ ಗ್ರಾಮದ ಬಹಳಷ್ಟು ಮಂದಿ ಸೋಂಕಿತರ ಪತ್ತೆಯಾಗುತ್ತಿದ್ದಾರೆ. ಇಂದು 40 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಇವರನ್ನು ಪಿ 94 ಎಂದು ಗುರುತಿಸಲಾಗಿದೆ.
ಇದರ ಹೊರತಾಗಿ ಮೈಸೂರು ಜಿಲ್ಲೆಯ ನಂಜನಗೂಡಿನ ಔಷಧಿ ಕಾರ್ಖಾನೆಯ ಉದ್ಯೋಗಿಯಾಗಿದ್ದ ರೋಗಿ ಸಂಖ್ಯೆ 52ರ ಜೊತೆಗಿನ ಸಂಪರ್ಕದಲ್ಲಿದ್ದ 35 ವರ್ಷದ ಹಾಗೂ 41 ವರ್ಷದ ಇಬ್ಬರು ಸಹದೋಗ್ಯಿಗಳಾದ ಮೈಸೂರು ನಿವಾಸಿಗಳಿಗೆ ಸೋಂಕು ಪತ್ತೆಯಾಗಿದ್ದು,. ಇವರನ್ನು ಪಿ 95 ಮತ್ತು 96 ಎಂದು ಗುರುತಿಸಲಾಗಿದೆ.
ಪಿ 97 ಸಂಖ್ಯೆಯ 34 ವರ್ಷದ ದಕ್ಷಿಣ ಕನ್ನಡ ಜಿಲ್ಲೆಯ ಪುರುಷ ಮಾರ್ಚ್ 18ರಂದು ದುಬೈನಿಂದ ವಾಪಾಸ್ಸಾಗಿದ್ದರು. ಅವರಿಗೂ ಸೋಂಕು ತಗುಲಿದೆ. ಪಿ 98 ಸಂಖ್ಯೆಯ 26 ವರ್ಷದ ಯುವಕ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಯುವಕ ಮಾರ್ಚ್ ರಂದು ದುಬೈನಿಂದ ವಾಪಾಸ್ಸಾಗಿದ್ದ. ಇವರನ್ನೇಲ್ಲಾ ನಿಗದಿತ ಆಸ್ಪತ್ರೆಯಲ್ಲಿಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
# ಇನ್ನಷ್ಟು ಆತಂಕ ಮೂಡಿಸಿರುವ ನಿಜಾಮುದ್ದೀನ್ ಸಾಮೂಹಿಕ ಪ್ರಾರ್ಥನೆ :
ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಮರ್ಕಸ್ ನಲ್ಲಿ ಭಾಗವಹಿಸಿದ್ದ ರಾಜ್ಯದ 54 ಮಂದಿ ಸೋಂಕಿತರ ಮತ್ತಷ್ಟು ಆತಂಕ ಹೆಚ್ಚಿಸಿದ್ದಾರೆ.ಸರ್ಕಾರ ಉನ್ನತ ಮೂಲಗಳ ಪ್ರಕಾರ ರಾಜ್ಯದ 54 ಮಂದಿ ನಿಜಾಮುದ್ದೀನ್ ಮಸೀದಿಯಲ್ಲಿನ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು, ಮಾರ್ಚ್ 10ರಂದು ನಡೆದ ಮರ್ಕಸ್ ನಲ್ಲಿ ರಾಜ್ಯದ 45ಮಂದಿ ಭಾಗವಹಿಸಿದ್ದರು ಎಂದು ಖಚಿತವಾಗಿದೆ. ಅವರಲ್ಲಿ ಶಿರಾದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ 44 ಮಂದಿಯಲ್ಲಿ 13 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಬಾಕಿ ಉಳಿದ 31 ಮಂದಿಯ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ, ಸಿಂಗಾಪುರ, ದುಬೈ, ಸೌದಿ ಅರೆಬಿಯಾ, ಇಂಡೋನೆಷಿಯಾ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು. ಅಲ್ಲಿನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸೋಂಕು ಹರಡಿರುವ ಸಾಧ್ಯತೆಗಳಿವೆ. ಹಾಗಾಗಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಪತ್ತೆ ಹಚ್ಚಿ ಹೊಂ ಕ್ವಾರಂಟೈನ್ ನಲ್ಲಿಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಖದ್ದಾಗಿ ಆರೋಗ್ಯ ಇಲಾಖೆಯ ಹೆಲ್ಪ್ ಲೈನ್ ಅಥವಾ ನನಗೆ ವೈಯಕ್ತಿಕವಾಗಿ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
ಕರೆ ಮಾಡಿದವರ ಹೆಸರನ್ನು ಗೌಪ್ಯವಾಗಿ ಇಡುವುದಾಗಿಯೂ ಸಚಿವರು ತಿಳಿಸಿದ್ದಾರೆ. ದೆಹಲಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಎಲ್ಲೆಲ್ಲಿ ಸಂಚರಿಸಿದ್ದರು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಪ್ರಾಥಮಿಕ ಮತ್ತು ತೃತೀಯ ಸಂಪರ್ಕದಲ್ಲಿದ್ದವರನ್ನು ಹೊಂ ಕ್ವಾರಂಟೈನ್ ನಲ್ಲಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸುಮಾರು 54 ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಎಂದು ಸ್ಪಷ್ಟ ಪಡಿಸಿದ್ದಾರೆ. ಅವರಲ್ಲಿ ಬಹುತೇಕರು ಬೀದರ್, ಕಲ್ಬುರ್ಗಿ, ತುಮಕೂರು ಸೇರಿ ನಾನಾ ಜಿಲ್ಲೆಗಳಿಗೆ ಸೇರಿದ್ದಾರೆ. ಅವರನ್ನು ಪತ್ತೆ ಹಚ್ಚಿ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗುವುದು ಎಂದು ಹೇಳಿದರು