ಬೆಂಗಳೂರು,ಜೂ.11- ರಾಜ್ಯಸಭೆ ಚುನಾವಣೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ಪಕ್ಷದ ಕಚೇರಿ ಬಾಗಿಲು ತಟ್ಟುವವರ ಸಂಖ್ಯೆ ಹೆಚ್ಚಾಗಿದ್ದು, ಜೂ.29ರಂದು ನಡೆಯುವ ಪರಿಷತ್ ಚುನಾವಣೆಗೆ ಆಕಾಂಕ್ಷಿಗಳು ಮುಗಿಬೀಳುತ್ತಿದ್ದಾರೆ.
ನಾಮನಿರ್ದೇ ಶನ ಸ್ಥಾನಗಳು ಸೇರಿ ವಿಧಾನಪರಿಷತ್ನ ಒಟ್ಟು 12 ಸದಸ್ಯ ಸ್ಥಾನಗಳು ತೆರವಾಗಲಿದ್ದು, ಬಿಜೆಪಿಗೆ ಸುಲಭವಾಗಿ 9 ಸ್ಥಾನಗಳು ದೊರೆಯಲಿವೆ. 9 ಸದಸ್ಯ ಸ್ಥಾನಕ್ಕಾಗಿ ಸುಮಾರು 100 ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿರುವ ಪಕ್ಷದ ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನ ಗೆದ್ದುಕೊಳ್ಳಬಹುದು. ಈ ಸಂಬಂಧ ಮುಂದಿನ ವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ರಾಜ್ಯಸಭೆ ಚುನಾವಣೆಗೆ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ಟಿಕೆಟ್ ನೀಡಿದ ಮೇಲೆ ಬಿಜೆಪಿಯಲ್ಲಿ ಎಲ್ಲವೂ ದೆಹಲಿಯಿಂದಲೇ ನಿಗಧಿಯಾಗುತ್ತಿವೆ. ಹೀಗಾಗಿ ತಳಮಟ್ಟದ ಕಾರ್ಯಕರ್ತರಿಗೆ ಬಿಜೆಪಿ ಟಿಕೆಟ್ ನೀಡಿದ ಮೇಲೆ ಸಾಮಾನ್ಯ ಕಾರ್ಯಕರ್ತರು ಖುಷಿಯಾಗಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಚಿವರಾದ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಕೂಡ ಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ, ಇವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಆದರೆ ರಾಜ್ಯಸಭೆ ಟಿಕೆಟ್ ವಿಚಾರ ಬಿಎಸ್ವೈಗೆ ಆಘಾತ ನೀಡಿದೆ.