ಬೆಂಗಳೂರು: ‘ಅಪ್ಪು ದೇವರ ಮಗು. ಅದು ಸ್ವಲ್ಪದಿನ ನಮ್ಮ ಜೊತೆ ಇದ್ದು ಮತ್ತೆ ದೇವರ ಬಳಿಗೆ ಹೋಗಿದೆ. ಅದರ ಆತ್ಮ ನಮ್ಮ ಸುತ್ತಲೂ ಇದೆ. ಆದರೆ, ಆ ಮಗು ಮರೆಯಾದಾಗ ನಾನು ಆರೋಗ್ಯವಾಗಿದ್ದರೂ ನೋಡೋಕೆ ಬರಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ.
ಏಕೆಂದರೆ ನಾನು ಅಪ್ಪುವನ್ನು ಮೊದಲು ನೋಡಿದ್ದು 4 ವರ್ಷದ ಮಗುವಾಗಿದ್ದಾಗ. ಆ ಮಗುವಾಗಿಯೇ ಅಪ್ಪು ನನ್ನ ತಲೆಯಲ್ಲಿ ಇಂದಿಗೂ ಉಳಿದುಹೋಗಿದ್ದಾನೆ. ಆ ಮಗುವನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ…’ ಇದು, ಖ್ಯಾತ ತಮಿಳು ನಟ ಸೂಪರ್ಸ್ಟಾರ್ ರಜನಿಕಾಂತ್ ಅವರು ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಆಡಿದ ಮನದಾಳದ ಮಾತುಗಳು.
ರಾಜ್ಯ ಸರ್ಕಾರದಿಂದ ಮಂಗಳವಾರ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುರಿವ ಮಳೆಯಲ್ಲೇ ಸ್ವಚ್ಛ ಕನ್ನಡದಲ್ಲೇ ಮಾತುಗಳನ್ನು ಆರಂಭಿಸಿದ ರಜನೀಕಾಂತ್, ಮೊದಲು ಸಮಸ್ತ ಕನ್ನಡ ನಾಡಿನ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸಿ, ‘ಸಮಸ್ತ ನಾಡಿನ ಜನರು ನೆಮ್ಮದಿಯಾಗಿ ಇರಬೇಕೆಂದು ತಾಯಿ ರಾಜರಾಜೇಶ್ವರಿ, ಅಲ್ಲಾ ಹಾಗೂ ಜೀಸಸ್ನಲ್ಲಿ ಬೇಡುತ್ತೇನೆ’ ಎಂದರು.
ಬಳಿಕ ಪುನೀತ್ ರಾಜ್ಕುಮಾರ್ ಅವರನ್ನು ಕುರಿತು ಮಾತು ಆರಂಭಿಸಿದ ಅವರು, ‘ಅಪ್ಪು ದೇವರ ಮಗು. ಆ ಮಗು ಮರೆಯಾದಾಗ ನನಗೆ ಆಪರೇಷನ್ ಆಗಿ ಆಸ್ಪತ್ರೆಯಲ್ಲಿ ಇಂಟೆನ್ಸಿವ್ ಕೇರ್ನಲ್ಲಿದ್ದೆ. ಆ ಸಮಯದಲ್ಲಿ ನನಗೆ ಅಪ್ಪು ಮರೆಯಾದ ವಿಷಯ ಹೇಳಬಾರದೆಂದು ಮುಚ್ಚಿಟ್ಟಿದ್ದರು. 3 ದಿನಗಳ ಬಳಿಕ ನನಗೆ ವಿಷಯ ಗೊತ್ತಾಯಿತು. ನನಗೆ ನಂಬಲಾಗಲಿಲ್ಲ. ಬರಲೂ ಆಗಲಿಲ್ಲ’ ಎಂದರು.
ಮನುಷ್ಯತ್ವದ ಸಾಕಾರಮೂರ್ತಿ:
‘ಅಪ್ಪು ಮರೆಯಾದಾಗ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಬಂದಿದ್ಯಾಕೆ? ಅಪ್ಪು ಒಬ್ಬ ನಟ, ನಟ ಸಾರ್ವಭೌಮನ ಮಗ ಎಂದಲ್ಲ. ಅವನ ಒಂದು ಮನುಷ್ಯತ್ವಕ್ಕೆ. ಅವನಲ್ಲಿದ್ದ ಹೃದಯ ಶ್ರೀಮಂತಿಕೆ, ಧಾರಾಳ ದಾನ, ಧರ್ಮದ ಗುಣ. ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಕೋಟಿ ಕೋಟಿ ದಾನ ಮಾಡಿ ಪರೋಪಕಾರ ಮಾಡಿದ ಫಲ. ಯಾರೇ ಆಗಲಿ ಒಬ್ಬ ನಟನಾಗಿ ಕ್ಯಾಮರಾದಿಂದ ಜನಗಳ ಮನ ಗೆಲ್ಲಲು ಸಾಧ್ಯವಿಲ್ಲ. ನಿಜ ಜೀವನದಲ್ಲಿ ಹೇಗೆ ಬಾಳುತ್ತಾನೆ.