ಚಾಮರಾಜನಗರ (ಜನವರಿ 02); ಚಾಮರಾಜನಗರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡದಿದ್ದಲ್ಲಿ ಅವರ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಚಾಮರಾಜನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡಬೇಕು ಎಂದು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ಕೆಲ ಕಾಲ ಬಸ್ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಲೆಕ್ಕವಿಲದಷ್ಟು ಬಾರಿ ಹೋಗಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿದ್ದಾರೆ. ಆದರೆ ಚಾಮರಾಜನಗರಕ್ಕೆ ಒಂದು ಬಾರಿಯೂ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಆದವರು ಚಾಮರಾಜನಗರಕ್ಕೆ ಭೇಟಿ ನೀಡದೆ ಇಲ್ಲಿನ ಜನತೆಗೆ ಅವಮಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಈ ನಡೆ ಕೇವಲ ಚಾಮರಾಜನಗರ ಜನತೆಗಷ್ಟೇ ಅಲ್ಲ ಇಡೀ ಮಾನವ ಕುಲಕ್ಕೆ ಅವಮಾನ ಮಾಡಿದಂತೆ ಎಂದ ವಾಟಾಳ್ ನಾಗರಾಜ್, ಇಲ್ಲಿಗೇಕೆ ಬರುತ್ತಿಲ್ಲ, ಕಾರಣವೇನು? ಎಂದು ಪ್ರಶ್ನಿಸಿದರು. ಈ ಬಗ್ಗೆ ಹೈಕೋರ್ಟ್ ನಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಜೊತೆಗೆ ಚಾಮರಾಜನಗರದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು, ಇಲ್ಲದಿದ್ದರೆ ಚಾಮರಾಜನಗರವನ್ನು ಬಸವನನಾಡು ಎಂದು ಪ್ರತ್ಯೇಕ ರಾಜ್ಯ ಎಂದು ಘೋಷಿಸಲಿ ಎಂದು ಆಗ್ರಹಿಸಿದರು.
https://www.facebook.com/105350550949710/videos/395049025058240/
ತಾವು ಅಖಂಡ ಕರ್ನಾಟಕವನ್ನು ಒಡೆಯಲು ಯಾವತ್ತು ಬೆಂಬಲ ಕೊಡುವುದಿಲ್ಲ. ಈಗಲೂ ಪ್ರತ್ಯೇಕ ರಾಜ್ಯಕ್ಕೆ ನನ್ನ ವಿರೋಧವಿದೆ. ಆದರೆ ಮುಖ್ಯಮಂತ್ರಿಗಳ ಧೋರಣೆಯಿಂದ ಬೇಸತ್ತು ಈ ಮಾತು ಹೇಳಬೇಕಾಗಿದೆ. ನಾಡಿನ ಮುಖ್ಯಮಂತ್ರಿ ಆದ ನೀವು ಎಲ್ಲಾ ಪ್ರದೇಶಗಳನ್ನು ಸಮನಾಗಿ ಕಾಣಬೇಕು. ಈ ರೀತಿಯ ಧೋರಣೆಗಳು ಮುಖ್ಯಮಂತ್ರಿ ಆದವರಿಗೆ ಶೋಭೆ ತರುವುದಿಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಏನಾಗುತ್ತದೆ ಹೇಳಿ ಯಡಿಯೂರಪ್ಪನವರೆ ಎಂದ ಅವರು ಚಾಮರಾಜನಗರಕ್ಕೆ ಹೋಗುವಂತೆ ನಾಡಿನ ಮಠಾಧೀಶರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಬೇಕು ಎಂದು ಆಗ್ರಹಿಸಿದರು.