ಬೆಂಗಳೂರು,ಫೆ.24- ಹಫ್ತಾ ವಸೂಲಿ, ಸುಲಿಗೆ, ಬೆದರಿಕೆ ಸೇರಿದಂತೆ ಭೂಗತ ಚಟುವಟಿಕೆಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ನಟೋರಿಯಸ್ ರವಿ ಪೂಜಾರಿಯನ್ನು ಸ್ವದೇಶಕ್ಕೆ ಕರೆತಂದು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮುಂಜಾನೆ ಸೆನೆಗಲ್ನಿಂದ ಬೆಂಗಳೂರಿಗೆ ರವಿ ಪೂಜಾರಿಯನ್ನು ಕರೆತರಲಾಗಿದ್ದು, ಮಡಿವಾಳದಲ್ಲಿರುವ ಇಂಟರಾಗೇಷನ್ ಕಚೇರಿಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗಿದೆ.
ಎಡಿಜಿಪಿ ಅಮರ್ಕುಮಾರ್ ಪಾಂಡೆ ನೇತೃತ್ವದ ತಂಡ ರವಿ ಪೂಜಾರಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಕರ್ನಾಟಕದಲ್ಲಿ ರವಿಪೂಜಾರಿ ವಿರುದ್ಧ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜಕಾರಣಿಗಳಿಗೆ ಪ್ರಾಣ ಬೆದರಿಕೆ ಹಾಕಿರುವುದು, ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಆತ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ರವಿ ಪೂಜಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಭಾರತೀಯ ಪೊಲೀಸರ ವಶದಲ್ಲೇ ಇರುವ ಪೂಜಾರಿಯನ್ನು ಭಾನುವಾರ ತಡರಾತ್ರಿ ದಿಲ್ಲಿಗೆ ಕರೆತಂದು ದಿಲ್ಲಿಯಿಂದಲೇ ಬೆಂಗಳೂರಿಗೆ ಕರೆತರಲು ಯೋಜನೆ ರೂಪಿಸಲಾಗಿತ್ತು.ಕಾಂಗ್ರೆಸ್ ನಾಯಕರಾದ , ತನ್ವೀರ್ ಸೇಠ್, ಹೆಚ್ಎಂ ರೇವಣ್ಣ, ಕೇರಳ ವಿರೋಧ ಪಕ್ಷದ ನಯಕ ರಮೇಶ್ ಚೆನ್ನಾತ್ತಾಲಾ ಹಾಗೂ ಸಂಸದ ಡಿಕೆ ಸುರೇಶ್ ತಮಗೆ ರವಿ ಪೂಜÁರಿಯಿಂದ ಬೆದರಿಕೆ ಇದೆ ಎಂದು ದೂರು ದಾಖಲಿಸಿದ್ದರು.
ಮಲ್ಪೆ ಮೂಲದ ಈ ಗ್ಯಾಂಗ್ಸ್ಟರ್ ವಿರುದ್ಧ ಮಂಗಳೂರಿನಲ್ಲಿ 33ಕ್ಕೂ ಹೆಚ್ಚು , ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ರವಿ ಪೂಜಾರಿ, ಸುಮಾರು 30 ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ. ಸೆನೆಗಲ್ನ ಜೈಲಿನಲ್ಲಿದ್ದ ಆತನನ್ನು ಗಡಿಪಾರು ಮಾಡಿದ ಹಿನ್ನೆಲೆಯಲ್ಲಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದೆ. ರಾತ್ರಿ 12.40ರ ಸುಮಾರಿಗೆ ಆತನನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಬೆಳಗ್ಗೆ ವಿಚಾರಣೆಗೆ ಒಳಪಡಿಸಲಾಗಿದೆ.
# ವಿವಿಧ ದೇಶಗಳಲ್ಲಿ ಓಡಾಟ:
ರಾಜ್ಯದಲ್ಲಿನ 70ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರವಿ ಪೂಜಾರಿ, 1990ರಲ್ಲಿ ದೇಶದಿಂದ ಪರಾರಿಯಾಗಿದ್ದ. ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ರವಿ ಪೂಜಾರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ, ಮುಲ್ಕಿ, ಮೂಡಬಿದರೆ, ಕೊಣಾಜೆ, ಮೂಡಬಿದರೆ, ಕಾವೂರು, ಊರ್ವ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 33ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಕೂಡ ಆತನ ಮೇಲೆ ಸುಮಾರು 20 ಪ್ರಕರಣಗಳಿವೆ.
ಸೆನೆಗಲ್ ದೇಶದ ಜೈಲಿನಲ್ಲಿ ಕಳೆದ ಒಂದೂವರೆ ವರ್ಷದಿಂದ ರವಿ ಪೂಜಾರಿಯನ್ನು ಭಾರತದ ಪೊಲೀಸರಿಗೆ ಹಸ್ತಾಂತರ ಮಾಡಿಸಲು ಸತತ ಪ್ರಯತ್ನಗಳು ನಡೆದಿದ್ದವು. ಆದರೆ ಆತನ ಗಡಿಪಾರು ವಿಚಾರದಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ನಡೆಯದ ಕಾರಣ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಈ ಪ್ರಕ್ರಿಯೆಯ ತೊಡಕುಗಳು ಬಗೆಹರಿದಿದ್ದರಿಂದ ಎರಡು ದಿನಗಳ ಹಿಂದೆಯಷ್ಟೇ ಅಲ್ಲಿನ ನ್ಯಾಯಾಲಯ ಆತನನ್ನು ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಿತ್ತು.
# 13 ರೆಡ್ ಕಾರ್ನರ್ ನೋಟಿಸ್:
2019 ರ ಜನವರಿ 19ರಂದು ರವಿ ಪೂಜಾರಿಯನ್ನು ಸೆನೆಗಲ್ನಲ್ಲಿ ಬಂಧಿಸಲಾಗಿತ್ತು. ಆದರೆ ಹಸ್ತಾಂತರ ಕುರಿತಂತೆ ಸೆನೆಗಲ್ ಜೊತೆ ಭಾರತ ಯಾವುದೇ ಒಪ್ಪಂದ ಹೊಂದಿಲ್ಲದ ಕಾರಣ ಕಾನೂನು ತೊಡಕಿನಿಂದ ಹಸ್ತಾಂತರ ಸಾಧ್ಯವಾಗಿರಲಿಲ್ಲ. ನಂತರ ಜಾಮೀನು ಪಡೆದು ಮತ್ತೆ ಭೂಗತನಾಗಿದ್ದ ಪೂಜಾರಿಯನ್ನು ಪುನಃ ಬಂಧಿಸಲಾಗಿದೆ. ಈ ಅವಧಿಯಲ್ಲಿ ಆತನ ವಿರುದ್ಧ 13 ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು.
ಮಂಗಳೂರಿನ ಪೊಲೀಸರು ಹಾಗೂ ಸೆನೆಗಲ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರವಿಪೂಜಾರಿಯನ್ನು ಬಂಧಿಸಲಾಗಿತ್ತು. ಬುರ್ಕಿನಾ ಫಾಸೋ ನಾಗರಿಕನೆಂದು ಹೇಳಿಕೊಂಡಿರುವ ಪೂಜಾರಿ ಅಂಥೋಣಿ ಫರ್ನಾಂಡೀಸ್ ಎಂದು ಬದಲಾಯಿಸಿಕೊಂಡಿದ್ದನೆಂದು ತಿಳಿದು ಬಂದಿದೆ.
# ಬಾಲಿವುಡ್ ನಟರಿಗೆ ಬೆದರಿಕೆ:
ಮಲ್ಪೆ ಮೂಲದ ರವಿ ಪೂಜಾರಿ ಮುಂಬೈನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ಬಾಲಾ ಜ್ವಾಲೆಯನ್ನು ಹತ್ಯೆ ಮಾಡಿದ ಬಳಿಕ ಭೂಗತ ಲೋಕದಲ್ಲಿ ರವಿ ಪೂಜÁರಿ ಹೆಸರು ಬೆಳಕಿಗೆ ಬಂದಿತು. ಮುಂಬೈನಲ್ಲಿ ಪ್ರಭಾವಿಯಾಗಿದ್ದ ಛೋಟಾ ರಾಜನ್ ತಂಡದಲ್ಲಿ ರವಿ ಪೂಜಾರಿ ಗುರುತಿಸಿಕೊಂಡಿದ್ದ. 1990ರಲ್ಲಿ ದುಬೈಗೆ ಪರಾರಿಯಾಗಿದ್ದ ಆತ, ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ಖಾನ್, ಅಕ್ಷಯ್ ಕುಮಾರ್, ನಿರ್ದೇಶಕ ಕರಣ್ ಜೋಹರ್, ನಿರ್ಮಾಪಕ ರಾಕೇಶ್ ರೋಷನ್ ಮುಂತಾದವರಿಗೆ ಅಲ್ಲಿಂದಲೇ ಜೀವ ಬೆದರಿಕೆವೊಡ್ಡಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.