ತುಮಕೂರು, ಫೆ.6- ರಾಜ್ಯದಲ್ಲಿ ಒಟ್ಟು 47 ಕೊರೋನಾ ಶಂಕಿತರ ರಕ್ತ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿದ್ದು, ಅವೆಲ್ಲವೂ ನೆಗೆಟಿವ್ ಆಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರಸ್ವಾಮಿಯವರ ಗದ್ದುಗೆ ದರ್ಶನ ಪಡೆದ ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್ ಇದೆ ಎನ್ನಲಾಗಿದ್ದು, ಅವರ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಸಂಜೆಯೊಂಗೆ ಫಲಿತಾಂಶ ಬರಲಿದೆ. ನಂತರ ವೈದ್ಯರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ರೋಗದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಅಸಮಾಧಾನ ವಿಲ್ಲ: ಸಂಪುಟ ವಿಸ್ತರಣೆ ಕುರಿತಂತೆ ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಪಕ್ಷ ಯಾವುದೇ ತಿರ್ಮಾನ ಕೈಗೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ. ನಾನಾಗಲಿ ಇತರೆ ಯಾರೇ ಆಗಲಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿಲ್ಲ. ಇದೆಲ್ಲಾ ಊಹಾಪೋಹ ಎಂದು ಸುದ್ದಿಗಾರರ ಪ್ರಶ್ನೆಗೆ ಶ್ರೀರಾಮುಲು ಉತ್ತರಿಸಿದರು.
ಡಿಸಿಎಂ ವಿಚಾರ ಕುರಿತಂತೆ ನಾನು ಪಕ್ಷಕ್ಕೆ ಯಾವುದೇ ಮುಜುಗರ ಉಂಟು ಮಾಡುವುದಿಲ್ಲ. ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನಾನು ಪಕ್ಷದಲ್ಲೆ ಇರುತ್ತೇನೆ. ಪಕ್ಷದ ಸಿದ್ದಾಂತದ ಮೇಲೆ ನಡೆಯಬೇಕು ಎಂದು ತಿಳಿಸಿದರು. ಯಾವುದೇ ಸ್ವಾಮಿಜಿಗಳಿಂದ ಒತ್ತಡ ಹೇರಿಲ್ಲ. ರಾಜ್ಯದಲ್ಲಿ ಕೆಲವರ ತ್ಯಾಗದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಬಿಜಿಪಿ ಪಕ್ಷವನ್ನು ನಂಬಿದವರಿಗೆ ಯಾವತ್ತೂ ಕೆಡಕು ಅಗುವುದಿಲ್ಲ ಎಂದರು.