ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರಬುದ್ಧರು. ಅನರ್ಹರು ಜನತಾ ನ್ಯಾಯಾಲಯದಲ್ಲಿ ಗೆದ್ದು ಅರ್ಹರಾಗಿದ್ದಾರೆ. ನೂತನ 10 ಸಚಿವರೂ ಕೂಡ ಸಿದ್ದರಾಮಯ್ಯ ಬೆಂಬಲಿಗರು. ಹೀಗಾಗಿ ಅವರನ್ನು ಒಳ್ಳೆಯ ಕೆಲಸ ಮಾಡಿ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಬಿಎಸ್ಪಿ ಉಚ್ಛಾಟಿತ ಶಾಸಕ ಎನ್ ಮಹೇಶ್ ಸಲಹೆ ನೀಡಿದ್ದಾರೆ.
ಚಾಮರಾಜನಗರದ ಯಳಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರು ಯಾವುದೇ ಪಕ್ಷಕ್ಕೆ ಹೋಗಿ ಮಂತ್ರಿಯಾದರೂ ಆವರು ಅನರ್ಹರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹೇಶ್, ಯಾಕೆ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಮಾರ್ಗದರ್ಶನ ಮಾಡಬೇಕು. ಡಿಸ್ಕರೇಜ್ ಮಾಡುವ ಕೆಲಸ ಬೇಡ ಎಂದರು.
ಗೆದ್ದಿರುವ ಶಾಸಕರನ್ನು ಮಂತ್ರಿ ಮಾಡಿದ್ದಾರೆ. ಮಹೇಶ್ ಕುಮಟಳ್ಳಿ ಸೇರಿದಂತೆ ಉಳಿದವರಿಗೆ ಮುಂದೆ ಸ್ಥಾನಮಾನ ಸಿಗುತ್ತೆ. ಯಡಿಯೂರಪ್ಪ ನಂಬಿಕೆ ಉಳಿಸಿಕೊಳ್ಳುವ ಮನುಷ್ಯ. ನನಗೂ ಕೂಡ ಅವರ ಮೇಲೆ ನಂಬಿಕೆಯಿದೆ. ಬಾಯಲ್ಲಿ ಒಂದು ಬಾರಿ ಹೇಳಿದ್ರೆ ಮಾಡೇ ಮಾಡ್ತಾರೆ. ಯಡಿಯೂರಪ್ಪ ಬಳಿ ನನ್ನದೇನೂ ಡಿಮ್ಯಾಂಡ್ ಇಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಿದ್ದೇನೆ ಅಷ್ಟೇ ಎಂದರು.
ಇನ್ನು ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಇಂಗಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮೂರೂವರೆ ವರ್ಷದ ನಂತರ ಎಲೆಕ್ಷನ್ ಮುಗಿದ ಮೇಲೆ ತಾನೇ, ಅಲ್ಲಿ ತನಕ ಎಲ್ಲಿ ಸಿಎಂ ಆಗ್ತಾರೆ.? ಅವರು ಆಸೆ ಪಡೋದ್ರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಸಿಎಂ ಆಗ್ಲಿ. ಈಗಾಗಲೆ ಅಲ್ಲೂ ಬೇರೆಯವರು ಕೂಡ ಕ್ಯೂನಲ್ಲಿದ್ದಾರೆ. ಅವರೇ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡ್ತಾರೆ ಎಂದು ತಿಳಿಸಿದರು.