ಗೋಕಾಕ್: ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ಆದ ಕಾರಣ ಎಲ್ಲ ಸಮುದಾಯದ ಜನರು ಸಹ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಜನರು ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳು ಹಾಗೂ ಸರ್ವ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಆದ ಕಾರಣ ಗೋಕಾಕ್ ತಾಲ್ಲೂಕಿನ ಎಲ್ಲ ಸಮಾಜದ ಮುಖಂಡರು ತಮ್ಮ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು. ನಿಮ್ಮಲ್ಲಿ ಕೆಮ್ಮು, ಜ್ವರ ಬಂದರೆ ತಕ್ಷಣ ಆಸ್ಪತ್ರೆ ತೆರಳಿ ತೋರಿಸಬೇಕು, ನಿರ್ಲಕ್ಷ್ಯ ಬೇಡ ಎಂದರು.
ಮುಸ್ಲಿಮರು ಮಸೀದಿಯಲ್ಲಿ ನಮಾಜ್, ಹಿಂದುಗಳು ಜಾತ್ರೆ, ಕಾರ್ಯಕ್ರಮಗಳನ್ನು ಮಾಡಬೇಡಿ. ನಾನು ಸಹ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೊಗಿ ಬರುತ್ತಿದ್ದೆ. ಕೊರೊನಾ ಕಾರಣದಿಂದ ಹೋಗುವುದನ್ನು ಬಿಟ್ಟಿರುವೆ. ಕೊರೊನಾ ಸೋಂಕು ಒಬ್ಬರಿಂದ ಇಡೀ ಜಿಲ್ಲೆಗೆ ಹರಡುವ ಸಾಧ್ಯತೆ ಇರುತ್ತದೆ. ಆದ ಕಾರಣ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಗಲ್ಲಿಯಲ್ಲಿ ಬೇರೆ ಕಡೆಯಿಂದ ಯಾರೇ ಬಂದಿದ್ರು, ಆರೋಗ್ಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಗೋಕಾಕ ಕ್ಷೇತ್ರದಲ್ಲಿ ನಿಮಗೆ ಆಹಾರ ಸಾಮಗ್ರಿಗಳ ಕೊರತೆ, ಸಮಸ್ಯೆಯಾಗಿದ್ರೆ ಅಧಿಕಾರಿಗಳು ಹಾಗೂ ನಮ್ಮ ಗಮನಕ್ಕೆ ತನ್ನಿ . ಕೂಡಲೇ ಬಗೆಹರಿಸಲಾಗುತ್ತದೆ. ಆದರೆ ಸರ್ಕಾರದ ನಿಯಮಗಳನ್ನು ಮಾತ್ರ ಉಲ್ಲಂಘಿಸಬಾರದು. ಕೊರೊನಾ ಬರಿ ಸರ್ಕಾರದಿಂದ ಮಾತ್ರ ತಡೆಯುವ ಕೆಲಸವಲ್ಲ. ಪ್ರತಿಯೊಬ್ಬ ನಾಗರಿಕರ ಕೆಲಸವಾಗಿದೆ. ನೀವು ಕೈ ಜೋಡಿಸಿದಾಗ ಮಾತ್ರ ಸಂಪೂರ್ಣವಾಗಿ ಕೊರೊನಾವನ್ನು ಹತ್ತಿಕ್ಕಲು ಸಾಧ್ಯವಾಗಲಿದೆ. ಆದ ಕಾರಣ ಆರೋಗ್ಯ ಅಧಿಕಾರಿಗಳಿಗೆ ಸಹಕಾರ ನೀಡಿ ಎಂದು ತಿಳಿಸಿದರು.