ಬೆಂಗಳೂರು,ಏ.16-ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ವಿವಾಹ ಮಹೋತ್ಸವದ ಅಂಗವಾಗಿ ಇಂದು ಅರಿಶಿಣ ಶಾಸ್ತ್ರ ಅವರವರ ನಿವಾಸದಲ್ಲಿ ನಡೆಯಲಿದೆ. ಮೊದಲು ರಾಮನಗರ ಚನ್ನಪಟ್ಟಣ ಮಧ್ಯೆ ಬೃಹತ್ ವೇದಿಕೆಯಲ್ಲಿ ವಿವಾಹ ನಡೆಸಲು ನಿರ್ಧಾರವಾಗಿತ್ತು. ತದನಂತರ ಕೊರೋನಾ ಹಾವಳಿಯಿಂದ ಸಮಸ್ಯೆ ಎದುರಾಗುತ್ತದೆ ಎಂದು ಅರಮನೆ ಮೈದಾನದ ಒಳಗೆ ನಿಗದಿ ಮಾಡಲಾಯಿತು. ಆದರೂ ಅದೂ ಬೇಡವೆಂದು ವಧುವಿನ ಸ್ವಗೃಹದಲ್ಲಿ ವಿವಾಹ ಎಂದು ನಿಶ್ಚಯವಾಗಿತ್ತು.
ಇವೆಲ್ಲವೂ ಒಂದು ಕಡೆಯಾದರೆ ಕೊನೆಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಆಸೆಯಂತೆ ತಮ್ಮ ನೆಚ್ಚಿನ ಕ್ಷೇತ್ರವಾದ ರಾಮನಗರದ ಕೇತಗಾನಹಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್ನಲ್ಲಿ ಮದುವೆ ನಡೆಸಲು ಅಂತಿಮ ತೀರ್ಮಾನವಾಗಿದೆ.
ಹೆಚ್. ಡಿ. ಕುಮಾರಸ್ವಾಮಿ ರವರ ಸುಪುತ್ರ ನಿಖಿಲ್ ಗೌಡ ಹಾಗೂ ರೇವತಿ ಅವರ ವಿವಾಹ ಇದೇ 17ರಂದು ಕೇತಗಾನಹಳ್ಳಿಯ ತೋಟದಲ್ಲಿ ಜರುಗಲಿದ್ದು , ಅಭಿಮಾನಿಗಳು, ಸ್ನೇಹಿತರು, ಹಾಗೂ ಬಂಧು ಮಿತ್ರರೆಲ್ಲರೂ ತಾವಿದ್ದ ಸ್ಥಳದಿಂದಲೆ ವಧುವರರನ್ನು ಆಶೀರ್ವಾದ ಮಾಡಬೇಕೆಂದು ವಿನಂತಿಸಿದ್ದಾರೆ.
ಕೊರೋನಾ ಪಿಡುಗು ಮರೆಯಾದ ಮೇಲೆ ತಮ್ಮೆಲ್ಲರ ಆಶೀರ್ವಾದಕ್ಕಾಗಿ ಅದ್ಧೂರಿಯಾದ ರಿಸೆಪ್ಷನ್ ಮೂಲಕ ದಂಪತಿಗಳು ನಿಮ್ಮ ಮುಂದೇ ಬರಲಿದ್ದಾರೆ. ವಿವಾಹದ ದಿನ ತಾವು ಅಭಿಮಾನದಿಂದ ಬಂದು ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ, ಪ್ರತಿಯೊಬ್ಬರ ಜೀವ , ಜೀವನ ಬಹಳ ಮುಖ್ಯ ಎಲ್ಲರೂ ಆರೋಗ್ಯವಾಗಿ ಮನೆಯಲ್ಲೇ ಇದ್ದು , ಆಶೀರ್ವದಿಸಿ ಎಂದು ಕುಮಾರಸ್ವಾಮಿ ಕೋರಿದ್ದಾರೆ.
ಇಂದು ಅರಿಶಿಣದ ಶಾಸ್ತ್ರ ನಡೆಯಲಿದ್ದು, ಎರಡು ಕುಟುಂಬಗಳ ನಿವಾಸಿಗಳಲ್ಲಿ ದೇವತಾ ಕಾರ್ಯ ಜರುಗಲಿದೆ. ಯಾವುದೇ ಆಡಂಬರವಿಲ್ಲದೆ ಸರಳಾತಿ ಸರಳವಾದರೂ ಅಚ್ಚುಕಟ್ಟಾಗಿ ಶಾಸ್ತ್ರಗಳನ್ನು ಮಾಡುಲು ಮುಂದಾಗಿದ್ದಾರೆ.
ಎರಡೂ ಕುಟುಂಬದ ಪ್ರಮುಖರು , ಮುಖ್ಯಸ್ಥರು ಮಾತ್ರ ಮದುವೆಯ ಸಮಾರಂಭದಲ್ಲಿ ಭಾಗಿಯಾಗಲಿದ್ದು , ರಾಜಕೀಯ ಹಾಗೂ ಚಿತ್ರೋದ್ಯಮದ ಸ್ನೇಹಿತರು ಈ ಮದುವೆ ಸಮಾರಂಭಕ್ಕೆ ಹೋಗುವುದು ಅನುಮಾನವಿದೆ. ಏನೇ ಇರಲಿ ಈ ಒಂದು ಶುಭ ಸಮಾರಂಭ ಅಚ್ಚುಕಟ್ಟಾಗಿ ನಡೆಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.