ಮಂಗಳೂರು: ಕೊರೊನಾ ಭೀತಿಯಿಂದ ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬರು ಸಾಮಾಜಿಕ ಅಂತರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮರದ ಮೇಲೆಯೇ ಟ್ರೀಹೌಸ್ ನಿರ್ಮಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ವಿವೇಕ್ ಆಲ್ವ ಮರದ ಮೇಲೆ ಮನೆ ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು, ಕೃಷಿ ಸಂಶೋಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತನ್ನ ಮನೆಯ ಸಮೀಪವಿರುವ ಕೃತಕ ಕಾಡಿನಲ್ಲಿ 7 ದಿನಗಳ ಕಾಲ ಕೆಲಸ ಮಾಡಿ ಮರದ ಮೇಲೆ ಗುಡಿಸಲನ್ನು ನಿರ್ಮಾಣ ಮಾಡಿದ್ದಾರೆ.
ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಅದ್ಭುತ ಪ್ರಕೃತಿ ಸೌಂದರ್ಯದ ಅನುಭವವನ್ನು ನೀಡುತ್ತದೆ. ಈ ಮರದ ಮೇಲಿನ ಗುಡಿಸಲಿನಲ್ಲಿ ಹಕ್ಕಿಗಳ ಚಿಲಿಪಿಲಿ, ಪುಸ್ತಕ ಓದುವುದು, ಏಕಾಂತದಲ್ಲಿ ಸಂಗೀತ ಕೇಳುವುದು, ತಂಪಾದ ಗಾಳಿಯೊಂದಿಗೆ ಪ್ರಕೃತಿ ವೀಕ್ಷಣೆ ಮಾಡಬಹುದು. ಜೊತೆಗೆ ಇಲ್ಲಿ ಇವರು ಹಕ್ಕಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ವಿವೇಕ್ ಆಳ್ವ ಹೇಳಿದ್ದಾರೆ.
ಈ ಗುಡಿಸಲಿನ ಸುತ್ತ ಬಿಸಿಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಶಾಡೋ ನೆಟ್ ಹಾಕಲಾಗಿದೆ. ಕುಳಿತುಕೊಳ್ಳಲು ಚೇರ್ ಗಳ ವ್ಯವಸ್ಥೆ ಮಾಡಲಾಗಿದೆ. ಸದ್ಯ ಲಾಕ್ಡೌನ್ ನಿಂದ ಸಮಯ ಕಳೆಯಲು ಇದು ಉತ್ತಮ ಜಾಗ ಎಂದು ವಿವೇಕ್ ಆಳ್ವ ತಿಳಿಸಿದ್ದಾರೆ.