ಹುಬ್ಬಳ್ಳಿ(ಏ.12): ಕೊರೋನಾ ಸೋಂಕಿನ ವಿರುದ್ಧ ವಿಶ್ವದ ವೈದ್ಯರು ಮನುಕುಲದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಉಣಕಲ್ ಗ್ರಾಮದ ಪಶುವೈದ್ಯರು ಮೃತ್ಯುವಿನ ಬಾಗಿಲು ತಟ್ಟಿದ್ದ ಅನಾಥ ಗರ್ಭಿಣಿ ಹಸುವಿಗೆ ಮರುಜನ್ಮ ನೀಡಿದ್ದಾರೆ.
ಈ ಹೃದಯಸ್ಪರ್ಶಿ ಘಟನೆ ಉಣಕಲ್ ಸಿದ್ದಪ್ಪಜ್ಜನ ಹೊಸಮಠದ ಆವರಣದಲ್ಲಿ ನಡೆದಿದೆ. ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಪರಸ್ಪರ ಬಡಿದಾಡುತ್ತ ಬಂದ ನಾಲ್ಕಾರು ಬೀಡಾಡಿ ದನಗಳು ತುಂಬು ಗರ್ಭಿಣಿ ಹಸುವೊಂದನ್ನು ಕೆಳಗೆ ಬೀಳಿಸಿದ್ದವು. ಹಸುವಿನ ಮೇಲೆ ದಾಳಿ ನಡೆಸುವ ಮೂಲಕ ಅದರ ಹೊಟ್ಟೆಗೆ ಕೊಂಬಿನಿಂದ ಚುಚ್ಚಿದ್ದವು. ಪ್ರಜ್ಞೆ ತಪ್ಪಿದ ಹಸು ಮಾರಣಾಂತಿಕವಾಗಿ ನರಳುತ್ತಾ ಬಯಲಿನಲ್ಲಿ ಬಿದ್ದಿತ್ತು.
ಇದನ್ನು ಗಮನಿಸಿದ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ ಕೊರವಿ ಹಾಗೂ ಸಂಗಡಿಗರು ಹಸುವಿನ ನೋವಿಗೆ ಸ್ಫಂದಿಸಿ ಅದರ ಉಪಚಾರ ಮಾಡಿದ್ದಾರೆ. ತಕ್ಷಣ ಉಣಕಲ್ ಪಶುವೈದ್ಯರನ್ನು ಕರೆಸಿ ಪರಿಸ್ಥಿತಿ ವಿವರಿಸಿದ್ದಾರೆ. ಗರ್ಭದಲ್ಲಿರುವ ಕರು ಸತ್ತಿದ್ದರಿಂದ ಹಸುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹಸು ಉಳಿಸುವ ಪ್ರಯತ್ನಕ್ಕೆ ಸ್ಥಳೀಯರೆಲ್ಲರೂ ಮುಂದಾಗಿದ್ದಾರೆ. ವೈದ್ಯರ ಸಲಹೆಯ ಅನ್ವಯ ಹಸುವಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ನಿರ್ಧರಿಸಿದ್ದಾರೆ.