ಸಂಪುಟಕ್ಕೆ ಸೇರ್ಪಡೆಯಾಗುವವರು :
ರಮೇಶ್ ಜಾರಕಿಹೊಳಿಬಿ.ಸಿ.ಪಾಟೀಲ್
ಉಮೇಶ್ ಕತ್ತಿ
ಮಹೇಶ್ ಕುಮಟಳ್ಳಿ
ಆನಂದ್ ಸಿಂಗ್
ಕೆ.ಸಿ.ನಾರಾಯಣಗೌಡ
ಎಸ್.ಟಿ.ಸೋಮಶೇಖರ್
ಕೆ.ಗೋಪಾಲಯ್ಯ
ಭೈರತಿ ಬಸವರಾಜ್
ಡಾ.ಕೆ.ಸುಧಾಕರ್
ಅರವಿಂದ ಲಿಂಬಾವಳಿ
ಹಾಲಪ್ಪ ಆಚಾರ್/ರಾಜುಗೌಡ ನಾಯಕ್
ಹಾಲಾಡಿ ಶ್ರೀನಿವಾಸ್ ಶೆಟ್ಟಿ/ಎಸ್. ಅಂಗಾರ
ಬೆಂಗಳೂರು,ಜ.27-ಒಂದು ವೇಳೆ ಹೈಕಮಾಂಡ್ ಅನುಮತಿ ನೀಡಿದರೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟಕ್ಕೆ 14 ಮಂದಿ ಸಚಿವರು ಸೇರ್ಪಡೆಯಾಗಲಿದ್ದಾರೆ. ನಾಳೆ ಸಂಜೆ ನವದೆಹಲಿಗೆ ತೆರಳಲಿರುವ ಯಡಿಯೂರಪ್ಪ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ನಡ್ಡ ಜೊತೆ ಔಪಚಾರಿಕ ಮಾತುಕತೆ ನಡೆಸಿ ಬುಧವಾರ ಸಂಪುಟ ವಿಸ್ತರಣೆ ಮಾಡಲಿದ್ದಾರೆ.
ಹಾಗೊಂದು ವೇಳೆ ದೆಹಲಿಯಿಂದ ಹಸಿರುನಿಶಾನೆ ಬಾರದಿದ್ದರೆ ಫೆ.8ರಂದು ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕವೇ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ. ಮೂಲಗಳ ಪ್ರಕಾರ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿ ದೆಹಲಿಗೆ ತಲುಪಿದ್ದು, ನಡ್ಡ ಅವರ ಅನುಮತಿ ಮಾತ್ರ ಬಾಕಿ ಇದೆ. ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ ರಾಷ್ಟ್ರೀಯ ನಾಯಕರ ಅನುಮತಿ ಕಡ್ಡಾಯವಾಗಿರುವುದು ಹಾಗೂ ಸಚಿವ ಸ್ಥಾನ ಸಿಗದಿರುವವರು ಬಂಡಾಯ ಸಾರಬಹುದೆಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಎಸ್ವೈ ರಕ್ಷಣಾತ್ಮಕ ತಂತ್ರ ಅನುಸರಿಸುತ್ತಿದ್ದಾರೆ.
ಬುಧವಾರ ಸಂಪುಟ ವಿಸ್ತರಣೆಗೆ ಶುಭ ಕಾಲ ಇರುವುದರಿಂದ ಅಂದೇ ಸೂಕ್ತ ಸಮಯ ಎಂಬುದು ಬಿಎಸ್ವೈ ಅವರ ಲೆಕ್ಕಾಚಾರ. ಬೆಳಗ್ಗೆ 10.45ರವರೆಗೆ ರಾಜಯೋಗ ಆರಂಭವಾಗಲಿದ್ದು, ಈ ವೇಳೆ ಸಂಪುಟ ವಿಸ್ತರಣೆ ಮಾಡಿದರೆ ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗುವುದಿಲ್ಲ ಎಂದು ಜ್ಯೋತಿಷಿಗಳು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಬುಧವಾರ ವಿಸ್ತರಣೆ ಮಾಡಲು ಅನುಮತಿ ನೀಡಬೇಕೆಂದು ದೆಹಲಿ ನಾಯಕರಿಗೆ ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ. ಕಳೆದ ಶನಿವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಸಂಪುಟಕ್ಕೆ ಸೇರ್ಪಡೆಯಾಗುವವರ ಕುರಿತಂತೆ ಚರ್ಚೆ ಮಾಡಲಾಗಿದೆ.
# ಯಾರ್ಯಾರು ಸೇರ್ಪಡೆ?:
ಒಂದು ವೇಳೆ ಬುಧವಾರ ಸಂಪುಟ ವಿಸ್ತರಣೆಯಾದರೆ ಕಾಂಗ್ರೆಸ್-ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಸಮ್ಮಿಶ್ರ ಸರ್ಕಾರದ ಅಸ್ಥಿರಕ್ಕೆ ಕಾರಣರಾಗಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ 11 ಮಂದಿ ಶಾಸಕರ ಪೈಕಿ ಮೊದಲ ಹಂತದಲ್ಲಿ 9 ಮಂದಿ ಶಾಸಕರು ಸಚಿವರಾಗುವ ಸೌಭಾಗ್ಯವಿದೆ.
ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಹಾಗೂ ಕಾಗವಾಡದ ಶ್ರೀಮಂತ ಪಾಟೀಲ್ಗೆ ಸಚಿವ ಸ್ಥಾನ ಸಿಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಆದರೆ ಇದರಲ್ಲಿ ಶಿವರಾಮ್ ಹೆಬ್ಬಾರ್ಗೆ ಮಂತ್ರಿ ಸ್ಥಾನ ಕೊಡಲೇಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಶ್ರೀಮಂತ್ ಪಾಟೀಲ್ಗೆ 2ನೇ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು, ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ ಸ್ಥಾನ ಕಲ್ಪಿಸುವ ಲೆಕ್ಕಾಚಾರದಲ್ಲಿ ಬಿಎಸ್ವೈ ಇದ್ದಾರೆ.
ಮುಂಬೈ ಕರ್ನಾಟಕ ಭಾಗದಿಂದ ಯಲ್ಬುರ್ಗ ಶಾಸಕ ಹಾಲಪ್ಪ ಆಚಾರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಈಗಾಗಲೇ ಸಂಪುಟದಲ್ಲಿ ವೀರಶೈವ ಲಿಂಗಾಯಿತ ಸಮುದಾಯದವರು ಹೆಚ್ಚಿನ ಸ್ಥಾನದಲ್ಲಿರುವುದರಿಂದ ಅವರ ಬದಲಿಗೆ ಯಾದಗಿರಿ ಶಾಸಕ ರಾಜುಗೌಡ ನಾಯಕ್ ಅವರನ್ನು ತೆಗೆದುಕೊಳ್ಳಲು ಬಿಎಸ್ವೈ ಪಟ್ಟು ಹಿಡಿದಿದ್ದಾರೆ.
ಈಗಾಗಲೇ ವಾಲ್ಮೀಕಿ ಸಮುದಾಯ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಪ್ರತಿಭಟನೆ ನಡೆಸುತ್ತಿದೆ. ಕಡೇ ಪಕ್ಷ ರಾಜುಗೌಡ ನಾಯಕ್ಗೆ ಸಚಿವ ಸ್ಥಾನ ನೀಡಿದರೆ ಮುನಿಸಿಕೊಂಡಿರುವ ಸಮುದಾಯವನ್ನು ಸಮಾಧಾನಪಡಿಸಬಹುದೆಂಬ ಲೆಕ್ಕಾಚಾರವು ಇದರಲ್ಲಿ ಅಡಗಿದೆ.
ಉಳಿದಂತೆ ಮಾಜಿ ಸಚಿವರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಕರಾವಳಿ ಭಾಗದಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅಥವಾ ಎಸ್.ಅಂಗಾರ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.
# ನಾಳೆ ದೆಹಲಿಗೆ:
ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುವ ಸಂಬಂಧ ಯಡಿಯೂರಪ್ಪ ನಾಳೆ ಕೊಡಗಿನಲ್ಲಿ ಕಾರ್ಯಕ್ರಮು ಮುಗಿಸಿಕೊಂಡು ನವದೆಹಲಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ.
ರಾತ್ರಿ ದೆಹಲಿಗೆ ತೆರಳಿ ಬುಧವಾರ ಮುಂಜಾನೆಯೇ ಬೆಂಗಳೂರಿಗೆ ಆಗಮಿಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
# ಸಂಪುಟಕ್ಕೆ ಸೇರ್ಪಡೆಯಾಗುವವರು :
ರಮೇಶ್ ಜಾರಕಿಹೊಳಿ
ಬಿ.ಸಿ.ಪಾಟೀಲ್
ಉಮೇಶ್ ಕತ್ತಿ
ಮಹೇಶ್ ಕುಮಟಳ್ಳಿ
ಆನಂದ್ ಸಿಂಗ್
ಕೆ.ಸಿ.ನಾರಾಯಣಗೌಡ
ಎಸ್.ಟಿ.ಸೋಮಶೇಖರ್
ಕೆ.ಗೋಪಾಲಯ್ಯ
ಭೈರತಿ ಬಸವರಾಜ್
ಡಾ.ಕೆ.ಸುಧಾಕರ್
ಅರವಿಂದ ಲಿಂಬಾವಳಿ
ಹಾಲಪ್ಪ ಆಚಾರ್/ರಾಜುಗೌಡ ನಾಯಕ್
ಹಾಲಾಡಿ ಶ್ರೀನಿವಾಸ್ ಶೆಟ್ಟಿ/ಎಸ್. ಅಂಗಾರ