ಇದೇ ೩೧ ರಂದು ನಡೆಯಬೇಕಿದ್ದ ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲ ೧೨ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.
ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಇಂದು, ೧೨ ಸ್ಥಾನಗಳಿಗೆ ಒಟ್ಟು ೩೮ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎರಡೂ ಗುಂಪಿನ ಮುಖಂಡರೊಂದಿಗೆ ನಡೆಸಿದ ಸಂಧಾನ ಫಲ ನೀಡಿದ್ದು, ಎಲ್ಲ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಚುನಾವಣೆ ಪ್ರಕ್ರಿಯೆ ಆರಂಭವಾದಾಗಿನಿಂದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿಯ ಸ್ಥಳೀಯ ಎರಡು ಗುಂಪುಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅಲ್ಲದೇ ಸಾರ್ವಜನಿಕ ವಲಯದಲ್ಲಿ ಮೂಡಲಗಿ ಪಿಕೆಪಿಎಸ್ ಚುನಾವಣೆ ಅತ್ಯಂತ ಕುತೂಹಲ ಕೆರಳಿಸಿತ್ತು. ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದ ಮುಖಂಡರು ಈ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡಿದ್ದರು. ಎರಡೂ ಬಣಗಳಿಂದ ಒಂದು ಹಂತದಲ್ಲಿ ಜಿಲ್ಲಾಧಿಕಾರಿಗಳವರೆಗೂ ಆರೋಪಗಳ ಬಗ್ಗೆ ಮನವಿಗಳು ಸಲ್ಲಿಕೆಯಾಗಿದ್ದವು.
ಬಾಲಚಂದ್ರ ಜಾರಕಿಹೊಳಿ ಆಪರೇಷನ್ ಸಕ್ಸಸ್
ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಬಹುತೇಕ ಸ್ಥಳೀಯ ಚುನಾವಣೆಗಳನ್ನು ಅವಿರೋಧವಾಗಿ ಆಯ್ಕೆ ಮಾಡುತ್ತ ಬರುತ್ತಿದ್ದ ಬಾಲಚಂದ್ರ ಜಾರಕಿಹೊಳಿ ಅವರಿಗೆ, ತಮ್ಮ ಗುಂಪಿನಲ್ಲಿಯೇ ಎರಡೂ ಬಣಗಳಾಗಿ ಈ ಚುನಾವಣೆಯನ್ನು ಎದುರಿಸುತ್ತಿರುವುದರಿಂದ ಕಗ್ಗಂಟಾಗಿ ಪರಿಣಮಿಸಿತ್ತು
ಅವಿರೋಧ ಆಯ್ಕೆಯಾದವರು
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ತಿಪ್ಪಣ್ಣಾ ಶಿವಬಸಪ್ಪ ಕುರಬಗಟ್ಟಿ, ಪ್ರಶಾಂತ ಬಸವಪ್ರಭು ನಿಡಗುಂದಿ, ಶಿವಲಿಂಗಪ್ಪ ಶಿವಲಿಂಗಪ್ಪ ಗೋಕಾಕ, ಶ್ರೀಶೈಲ ರಾಚಪ್ಪ ಬಳಿಗಾರ, ಸಂದೀಪ ಮಲ್ಲಪ್ಪ ಸೋನವಾಲ್ಕರ, ಸಾಲಗಾರ ಮಹಿಳಾ ಕ್ಷೇತ್ರದಿಂದ ನೀಲವ್ವಾ ದುಂಡಯ್ಯಾ ಮಠಪತಿ, ಮಾಯವ್ವ ಅಲ್ಲಪ್ಪ ಗುಡ್ಲಮನಿ, ಸಾಲಗಾರ ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಮಲ್ಲಪ್ಪ ಹಣಮಂತ ತಳವಾರ, ಮಾಯಪ್ಪ ಕೆಂಚಪ್ಪ ಕಂಕಣವಾಡಿ, ಸಾಲಗಾರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ರವೀಂದ್ರ ದಾವಿದಪ್ಪ ಸಣ್ಣಕ್ಕಿ, ಸಾಲಗಾರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಕರೆಪ್ಪ ಯಲ್ಲಪ್ಪ ನಾಯಿಕ, ಬಿನ್ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಸಂಗಮೇಶ ಶಿವಲಿಂಗಪ್ಪ ಕೌಜಲಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ದ್ವಿ.ದ.ಸ ಹರೀಶ ಕಾಂಬಳೆ ಪ್ರಕಟಿಸಿದ್ದಾರೆ