ಮೈಸೂರು (ಏಪ್ರಿಲ್ 25); ಜಿಲ್ಲೆಯ ನಂಜನಗೂಡಿನಲ್ಲಿ ಜುಬಿಲೆಂಟ್ಸ್ ಕಾರ್ಖಾನೆ ಕೊರೋನಾ ಹಾಟ್ಸ್ಪಾಟ್ ಆಗಿರುವ ಹಿನ್ನೆಲೆಯಲ್ಲಿ, ಕಾರ್ಖಾನೆಗೆ ಸೋಂಕು ತಗುಲಿದ್ದರ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಮೈಸೂರು ಕೋವಿಡ್-19 ವಿಶೇಷಾಧಿಕಾರಿ ಹರ್ಷಗುಪ್ತ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ಒಂದು ವಾರದ ಒಳಗಾಗಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ.
ಕಾರ್ಖಾನೆ ಸೋಂಕು ಎಲ್ಲಿಂದ ಬಂತು? ಯಾರಿಂದ ಬಂತು? ಪ್ರಥಮವಾಗಿ ಯಾರಿಗೆ ಬಂತು? ಸೋಂಕು ಹರಡುವಿಕೆಗೆ ಕಾರಣವೇನು? ಕಾರ್ಖಾನೆ ಜವಬ್ದಾರಿ ಏನು? ಹೀಗೆ ಎಲ್ಲಾ ವಿಚಾರಗಳ ಬಗ್ಗೆ ವಿಚಾರಣೆ ನಡೆಸಿ ಒಂದು ವಾರದ ಒಳಗಾಗಿ ಸಂಪೂರ್ಣ ವರದಿ ನೀಡಿ ಎಂದು ಹರ್ಷಗುಪ್ತಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧಿಕೃತವಾಗಿ ಸೂಚನೆ ಕೊಟ್ಟು ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ.
ಮೈಸೂರಿನಲ್ಲಿ ಬಹುತೇಕ ಮುಕ್ತಾಯಗೊಂಡಿರುವ ಜುಬಿಲೆಂಟ್ಸ್ ಸ್ಯಾಂಪಲ್ ಟೆಸ್ಟ್ನಿಂದಾಗಿ ಈ ವಾರದಿಂದ ನಂಜನಗೂಡು ಕೊರೋನಾ ನಂಜು ತಗ್ಗುವ ಸಾಧ್ಯತೆ ಇದೆ. ಶೇಖಡ 99% ಸ್ಯಾಂಪಲ್ ಟೆಸ್ಟ್ ಮುಗಿಸಿರುವ ಜಿಲ್ಲಾಡಳಿತ, ಜುಬಿಲೆಂಟ್ಸ್ ಸಂಬಂಧ 2098 ಮಂದಿ ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
473 ಮಂದಿ ಪ್ರೈಮರಿ ಸಂಪರ್ಕದಲ್ಲಿದ್ದರೆ, 1625 ಸೆಕೆಂಡರಿ ಸಂಪರ್ಕದಲ್ಲಿದ್ದಾರೆ. ಇದರಲ್ಲಿ ಕಾರ್ಖಾನೆಯ ನೌಕರರು 1483 ಮಂದಿ ಇದ್ದಾರೆ. ಜುಬಿಲೆಂಟ್ಸ್ ಕಾರ್ಖಾನೆ ಎರಡಂಕಿಯ ಸ್ಯಾಂಪಲ್ ಟೆಸ್ಟ್ ಬಾಕಿ ಇದ್ದು, ಉಳಿದಂತೆ ಜುಬಿಲೆಂಟ್ಸ್ ಸಂಪರ್ಕದ ಎಲ್ಲ ಟೆಸ್ಟ್ ಮುಗಿದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇನ್ನು ಕಳೆದ ಮೂರು ದಿನದಿಂದ ಮೈಸೂರಿನಲ್ಲಿ ಒಂದೆ ಒಂದು ಪಾಸಿಟಿವ್ ಕೇಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡು ನೆಮ್ಮದಿಯ ನಿದ್ರೆ ಮಾಡಿದೆ. ಮೈಸೂರಿನಲ್ಲಿ ಕೊರೋನಾ ಸೋಂಕು ಹರಡುವಿಕೆ ಕಡಿಮೆಯಾಗಿರುವ ಮುನ್ಸೂಚನೆ ಸಿಕ್ಕಿದ್ದು, ನಂಜನಗೂಡಿನಲ್ಲಿ ಮುಕ್ತಾಯಗೊಂಡ ಜುಬಿಲೆಂಟ್ಸ್ ಕಾರ್ಖಾನೆ ಸ್ಯಾಂಪಲ್ ಟೆಸ್ಟ್ಗಳಿಂದ ನಿಟ್ಟುಸಿರು ಬಿಟ್ಟ ನಂಜನಗೂಡು ಜನರು ಮತ್ತೆ ನಂಜನಗೂಡು ಕೇಸ್ಗಳು ಪಾಸಿಟಿವ್ ಆಗದಿರಲಿ ಎಂದು ಪ್ರಾರ್ಥಿಸುವಂತಾಗಿದೆ.
ಪ್ರವಾಸೋದ್ಯಮಕ್ಕೆ ಧಾರ್ಮಿಕ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದ ನಂಜನಗೂಡು ಕೊರೋನಾ ಕೇಸ್ನಿಂದ ಪ್ರವಾಸೋದ್ಯಮಕ್ಕೂ ಪೆಟ್ಟು ಕೊಟ್ಟಿದೆ. ನಂಜನಗೂಡು ಕೇಸ್ನಿಂದಾಗಿ ಮೈಸೂರಿನಲ್ಲಿ ಲಾಕ್ಡೌನ್ ಸಹ ಸಡಿಲಿಕೆ ಆಗಿಲ್ಲ ಮೂರು ದಿನದಿಂದ ಒಂದೆ ಒಂದು ಕೇಸ್ ಪತ್ತೆ ಆಗಿದೆ ಇರುವುದು ಕೊರೋನಾ ಹರಡುವಿಕೆ ಕಮ್ಮಿಯಾಗಿರೋದನ್ನ ಪ್ರದರ್ಶಿಸುತ್ತಿದ್ದರು ಲಾಕ್ಡೌನ್ ವಿನಾಯಿತಿ ಮೈಸೂರಿಗೆ ಸಿಕ್ಕಿಲ್ಲ