ಹಾಸನ; ದಂತ ಚಿಕಿತ್ಸಾಲಯ ತೆರೆಯಬಾರದೆಂಬ ನಿಯಮವಿದ್ದರೂ ಕ್ಲಿನಿಕ್ ತೆರೆದು ವೈದ್ಯನೋರ್ವ ಚಿಕಿತ್ಸೆ ಮಾಡುತ್ತಿದ್ದ ಘಟನೆ ಹಾಸನದಲ್ಲಿ ನಡೆದಿದೆ.
ನಗರದ ಹಳೇ ಬಸ್ ನಿಲ್ದಾಣದ ಮುಂಭಾಗವಿರುವ ಹಾಸನ ದಂತ ಚಿಕಿತ್ಸಾಲಯದಲ್ಲಿ ಡಾ.ಖಾನ್ ಕ್ಲಿನಿಕ್ ತೆರೆದು ಬೆಳಿಗ್ಗೆಯಿಂದ ಕೆಲ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಮಾಧ್ಯಮದವರು ಸ್ಥಳಕ್ಕೆ ತೆರಳಿದಾಗ ಕ್ಯಾಮರಾ ಕಂಡು ತಬ್ಬಿಬ್ಬಾದ ಡಾ.ಖಾನ್ ಕ್ಲಿನಿಕ್ ಬಾಗಿಲು ಮುಚ್ಚಲು ಮುಂದಾದರು.
ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಅಬ್ದುಲ್ ಕಿರಷ್ ಮತ್ತು ಪ್ರಖ್ಯಾತ ದಂತ ವೈದ್ಯೆ ಡಾ.ನಿಖಿತಾ ಅವರು ಕ್ಲಿನಿಕ್ಗೆ ಭೇಟಿ ನೀಡಿ ಡಾ.ಖಾನ್ ಅವರನ್ನು ತರಾಟೆ ತೆಗೆದುಕೊಂಡರು
ಕೊರೋನಾ ಭೀತಿಯಿಂದ ಯಾವುದೇ ಕಾರಣಕ್ಕೂ ದಂತ ಚಿಕಿತ್ಸೆ ಮಾಡಬಾರದು ಮತ್ತು ಕ್ಲಿನಿಕ್ ತೆರೆಯಬಾರದು ಎಂಬ ನಿಯಮ ರೂಪಿಸಲಾಗಿದೆ. ಇಡೀ ದೇಶಾದ್ಯಂತ ದಂತ ಚಿಕಿತ್ಸೆ ಮಾಡಬಾರದೆಂದು ನಿಯಮ ಮಾಡಿರುವುದರಿಂದ ಯಾವ ವೈದ್ಯರೂ ಡೆಂಟಲ್ ಕ್ಲಿನಿಕ್ ತೆರೆಯುತ್ತಿಲ್ಲ. ಆದರೆ ಡಾ. ಖಾನ್ ಅವರು ಮಾತ್ರ ನಿಯಮ ಗಾಳಿಗೆ ತೂರಿ, ಕ್ಲಿನಿಕ್ ಬಾಗಿಲು ತೆರೆದು ಚಿಕಿತ್ಸೆ ನೀಡಿದ್ದಾರೆ. ಇವರ ಜೊತೆಗೆ ಎಂಜಿ ರಸ್ತೆ ಮತ್ತು ಸಾಲಗಾಮೆ ರಸ್ತೆಯಲ್ಲೂ ಕೂಡ ದಂತ ವೈದ್ಯಕೀಯ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ದಂತ ಚಿಕಿತ್ಸೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕ್ಲಿನಿಕ್ ತೆರೆಯಬಾರದು ಎಂದು ಸರ್ಕಾರ ನಿಯಮ ರೂಪಿಸಿದ್ದರೂ ಕೂಡ ಈ ವೈದ್ಯರು ನಿಯಮ ಗಾಳಿಗೆ ತೂರಿದ್ದಾರೆ. ನಿಯಮ ಉಲ್ಲಂಘಿಸಿದ ಈ ವೈದ್ಯರ ವಿರುದ್ದ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.