ಬಾಗಲಕೋಟೆ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಫುಟ್ ಪಾತ್ ಮೇಲೆ ನಿಂತಿದ್ದವರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.
ಕೆರೂರು ಪಟ್ಟಣದ ಲಕ್ಷ್ಮಣ ಹಾದಿಮನಿ (32), ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಮಾನಂದಪ್ಪ ಕರಿ (17) ಹಾಗೂ ಹುಬ್ಬಳ್ಳಿಯ ಪೂಜಾ ಹಳಪೇಟೆ (22) ಮೃತ ದುರ್ದೈವಿಗಳು. ಗದಗ ಜಿಲ್ಲೆ ನರಗುಂದದ ನಿವಾಸಿ ಮಂಜುಳಾ ಜವಳಿ (16) ಹಾಗೂ ಪ್ರಜ್ವಲ್ ಕೋಟಿ (16) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೋರ್ವ ಗಾಯಾಳು ರಾಜೇಸಾಬ್ ಅಗಸಿಮನಿ ಅವರನ್ನು ಕೆರೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾರಿ ಚಾಲಕ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ವೇಗವಾಗಿ ಹೊರಟಿದ್ದ. ಆದರೆ ಕೆರೂರು ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಫುಟ್ ಪಾತ್ಗೆ ನುಗ್ಗಿದೆ. ಪರಿಣಾಮ ಲಾರಿ ಗುದ್ದಿದ ರಭಸಕ್ಕೆ ಕೆಪಿಟಿಸಿಎಲ್ ವಿದ್ಯುತ್ ಪ್ರಸರಣ ಕೇಂದ್ರದ ಕಂಪೌಂಡ್ ಒಡೆದು ಹೋಗಿದೆ. ಅಷ್ಟೇ ಅಲ್ಲದೆ ಪಾನ್ಶಾಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಫುಟ್ ಪಾತ್ ಮೇಲೆ ಹಾಗೂ ಪಾನ್ಶಾಪ್ ಮುಂದೆ ನಿಂತಿದ್ದ ಕೆಲವರು ತಕ್ಷಣವೇ ಪರಾರಿಯಾಗಿದ್ದಾರೆ. ಆದರೆ ಲಾರಿ ಹರಿದು ಮೂರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರಾಜೇಸಾಬ್ ಅಗಸಿಮನಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ.
ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕೆರೂರು ಪೊಲೀಸರು ಪರಿಶೀಲನೆ ನಡೆಸಿದರು. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಆತನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಘಟನೆಗೆ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ