ಚಿಕ್ಕೋಡಿ: ಲಾಕ್ಡೌನ್ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ನಡೆಯಬೇಕಿದ್ದ ಜಾತ್ರೆಯನ್ನು ರದ್ದು ಮಾಡಿ ಕೊರೊನಾ ವಾರಿಯರ್ಸ್ಗೆ ಅನ್ನ ದಾಸೋಹ ಮಾಡಿ ಹುಕ್ಕೇರಿ ಹಿರೇಮಠ ಮಾದರಿಯಾಗಿದೆ.
ಪ್ರತಿ ವರ್ಷ ಏಪ್ರಿಲ್ 24ರಿಂದ ಹುಕ್ಕೇರಿ ಹಿರೇಮಠದಲ್ಲಿ ಗುರುಶಾಂತೇಶ್ವರ ಜಾತ್ರೆ ನಡೆಯಬೇಕಿತ್ತು. ಆದರೆ ಜಾತ್ರೆಯನ್ನು ಈ ಬಾರಿ ರದ್ದು ಮಾಡಲಾಗಿದೆ. ಜಾತ್ರೆ ರದ್ದಾದರೂ ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ಪೌರ ಕಾರ್ಮಿಕರು, ಪೊಲೀಸರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಅನ್ನ ದಾಸೋಹವನ್ನು ಆಯೋಜಿಸಲಾಗಿತ್ತು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಲ್ಲ ಕೊರೊನಾ ವಾರಿಯರ್ಸ್ಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀಗಳು, ಪ್ರತಿ ವರ್ಷ ನಾವು ದೇವರಿಗೆ ನೈವೈದ್ಯ ಮಾಡುತ್ತಿದ್ದೆವು. ಆದರೆ ಈ ಬಾರಿ ದೇವಾಲಯದ ಬಾಗಿಲುಗಳು ಮುಚ್ಚಿ ಹೋಗಿವೆ. ಹೀಗಾಗಿ ಈ ವರ್ಷ ನಡೆದಾಡುವ ದೇವರುಗಳಾದ ಪೊಲೀಸರು, ವೈದ್ಯರು, ಪೌರ ಕಾರ್ಮಿಕರಿಗೆ, ಆಶಾ ಕಾರ್ಯಕರ್ತರಿಗೆ ಅನ್ನ ದಾಸೋಹ ನೀಡಿದ್ದು ಹೆಮ್ಮೆ ಅನಿಸುತ್ತದೆ. ಈ ರೀತಿಯ ಕಠಿಣ ಸಂದರ್ಭದಲ್ಲಿ ಕಾಪಾಡುತ್ತಿರುವ ಇವರೇ ನಿಜವಾದ ದೇವರು. ಇವರೆಲ್ಲರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಹೇಳಿದರು.