ಬೆಂಗಳೂರು: ಏಪ್ರಿಲ್ 14ರ ತನಕ ಮದ್ಯ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಖಡಕ್ ಆಗಿ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಏ.14ರ ವರಗೆ ಮದ್ಯದದಂಗಡಿ ತೆರೆಯಲು ಅನುಮತಿ ನೀಡುವುದಿಲ್ಲ. 14ರ ಬಳಿಕ ಪರಿಸ್ಥಿತಿ ನೋಡಿಕೊಂಡು ಮದ್ಯದಂಗಡಿ ತೆರೆಯಬೇಕೋ ಬೇಡ್ವೋ ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಹಿಂದೂ ಮುಸ್ಲಿಂ ಎಲ್ಲರಲ್ಲೂ ಒಂದೇ ಭಾವನೆ ಇದೆ. ಯಾರ ಬಗ್ಗೆಯೂ ಯಾರೂ ಮಾತಾಡಬಾರದು. ಜಮಾತ್ ಕಾರ್ಯಕ್ರಮಕ್ಕೆ ತೆರಳಿದ್ದು ಅಪರಾಧವಲ್ಲ. ಮುಸ್ಲಿಂ ನಾಯಕರ ಜತೆ ಸಭೆ ನಡೆಸಿದ್ದೇನೆ ಎಂದು ಈ ವೇಳೆ ಹೇಳಿದರು.
ಕಟ್ಟಿಂಗ್ ಶಾಪ್ ನವರು, ಆಟೋ ಡ್ರೈವರ್, ಮನೆ ಕೆಲಸದವರು ಪಡಿತರ ವ್ಯವಸ್ಥೆಯಲ್ಲಿ ಬರುತ್ತಾರೆ. ಗೋಧಿ ದಾಸ್ತಾನು ಸ್ವಲ್ಪ ಸಮಸ್ಯೆ ಆಗಿತ್ತು. ಈಗ ಖರೀದಿ ಮಾಡಿದ್ದೇವೆ. ಸರ್ಕಾರೇತರ ಸಂಸ್ಥೆಯ ಮೂಲಕ 50 ಸಾವಿರ ಊಟವನ್ನು ಹಂಚುತ್ತಿದ್ದೇವೆ. ಇಂದಿರಾ ಕ್ಯಾಂಟೀನ್ ಊಟವನ್ನು ಪ್ರಮುಖ ರಾಜಕೀಯ ಪಕ್ಷದ ಮುಖಂಡರೇ ಚುನಾವಣೆಗೆ ಹಂಚುತ್ತಿದ್ದರು. ಹಾಗಾಗಿ ಇಂದಿರಾ ಕ್ಯಾಂಟೀನ್ ಊಟ ದುರುಪಯೋಗಕ್ಕಾಗಿ ಹಣ ನಿಗದಿ ಮಾಡಿದ್ದು ಹೊರತು ಹಣ ಉಳಿಸಲು ಅಲ್ಲ ಎಂದು ತಿಳಿಸಿದರು.
ನರ್ಸ್, ಡಾಕ್ಟರ್ ಚಿಂತೆ ಮಾಡುವುದು ಬೇಡ. ಅವರ ಏನೇ ದೂರುಗಳಿದ್ದರೂ ಬಗೆಹರಿಸುತ್ತೇವೆ, ಸರ್ಕಾರ ಅವರ ಜೊತೆ ಇರುತ್ತದೆ ಎಂದ ಅವರು ತರಕಾರಿ, ಹಣ್ಣು ಪಡಿತರ ವ್ಯವಸ್ಥೆಯಲ್ಲಿ ಕೊಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಅದು ಕಷ್ಟ ಆಗುತ್ತದೆ ಎನ್ನುವ ವರದಿ ಬಂತು. ಹೀಗಾಗಿ ಐನೂರು- ಸಾವಿರ ಅಡಿ ಹತ್ತಿರದಲ್ಲಿ ಹಣ್ಣು, ತರಕಾರಿ ಸಿಗುವ ವ್ಯವಸ್ಥೆಯನ್ನು ಬೆಂಗಳೂರಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಕೊರೊನಾ ಪ್ರಕರಣಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಮೈಸೂರು ಪರಿಸ್ಥಿತಿ ಚೆನ್ನಾಗಿಲ್ಲ. ನಾನು ಈಗಾಗಲೇ ಜಿಲ್ಲಾಧಿಕಾರಿ ಜತೆ ಮಾತಾಡಿದ್ದೇನೆ. ಇವತ್ತು ಮೈಸೂರು ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿವೆ. ನಂಜನಗೂಡು ಮತ್ತು ದೆಹಲಿಯ ಜಮಾತ್ ಎರಡು ಪ್ರಕರಣದಿಂದಾಗಿ ನಮ್ಮಲ್ಲಿ ಕೊರೊನಾ ಹೆಚ್ಚಾಗಿದೆ ಎಂದು ತಿಳಿಸಿದರು.