ಬೆಂಗಳೂರು, ಫೆ.17-ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಭಾರೀ ತಯಾರಿ ನಡೆಸಿರುವ ಕಾಂಗ್ರೆಸ್ ನಾಳೆ ಮತ್ತೊಮ್ಮೆ ಶಾಸಕಾಂಗ ಸಭೆಯನ್ನು ಕರೆದಿದೆ. ಈ ಅಧಿವೇಶನದ ವೇಳೆ ಒಟ್ಟು ಮೂರು ಶಾಸಕಾಂಗ ಸಭೆಗಳು ನಡೆದಂತಾಗುತ್ತದೆ.ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ನಿನ್ನೆ ಸಂಜೆ ಖಾಸಗಿ ಹೊಟೇಲ್ನಲ್ಲಿ ಶಾಸಕಾಂಗ ಸಭೆ ನಡೆಸಲಾಯಿತು.ಇಂದು ಬೆಳಗ್ಗೆ ಮತ್ತೊಮ್ಮೆ ಸಭೆ ಸೇರಿ ಒಟ್ಟಾಗಿ ಅಧಿವೇಶನಕ್ಕೆ ತೆರಳಿದರು.
ರಾಜ್ಯಪಾಲರ ಭಾಷಣದಲ್ಲಿ ಪೌರತ್ವ ತಿದ್ದುಪಡಿ ವಿಷಯ ಕುರಿತಂತೆ ಪ್ರಸ್ತಾಪವಾದರೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಇಲ್ಲವಾದರೆ ಪೌರತ್ವ ತಿದ್ದುಪಡಿ ಜಾರಿ ಪ್ರಸ್ತಾಪ ಇಲ್ಲ ಎಂದಾದರೆ ರಾಜ್ಯಪಾಲರ ಭಾಷಣಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದಿರಲು ನಿರ್ಧರಿಸಲಾಗಿದೆ.
ಈ ಬಾರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಲವಾರು ಮಹತ್ವದ ವಿಷಯಗಳು ವಿರೋಧ ಪಕ್ಷದ ಕೈಗೂ ಸಿಕ್ಕಿವೆ. ಪ್ರತಿಯೊಂದು ವಿಷಯ ಮತ್ತು ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.ವಿಷಯಾಧಾರಿತ ಚರ್ಚೆಗೆ ಹೆಚ್ಚು ಒತ್ತು ಕೊಡಲು ಮೂರು ಮೂರು ಬಾರಿ ಶಾಸಕಾಂಗ ಸಭೆಗಳನ್ನು ಕರೆಯಲಾಗಿದೆ.
ಇಂದು ಬೆಳಗ್ಗೆ ವಿಧಾನಪರಿಷತ್ನ ಚುನಾವಣೆ ಕೂಡ ನಡೆದಿತ್ತು. ಶಾಸಕಾಂಗ ಸಭೆಯಲ್ಲಿ ಭಾಗವಹಿಸಲು ಬಂದ ಕಾಂಗ್ರೆಸ್ನ ಶಾಸಕರು ಮಾಹಿತಿ ಇಲ್ಲದೆ ಚುನಾವಣೆ ನಡೆಯುವ ಮತಗಟ್ಟೆಯತ್ತ ಹೋಗುತ್ತಿದ್ದರು. ಅವರನ್ನು ತಡೆಯಲು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಬಾಗಿಲಲ್ಲೇ ನಿಂತು ಶಾಸಕರನ್ನು ಶಾಸಕಾಂಗ ಸಭೆಗೆ ಕರೆದೊಯ್ದರು.