ನವದೆಹಲಿ, ಏ.22- ಇಂದು ಭೂಮಿ ದಿನ. ಈ ಸಂದರ್ಭದಲ್ಲಿ ಭೂಮಿ ತಾಯಿಯ ರಕ್ಷಣೆಗಾಗಿ ನಾವೆಲ್ಲರೂ ಪಣ ತೊಟ್ಟು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನಮ್ಮ ಭೂಮಂಡಲವು ಹೆಚ್ಚು ಶುದ್ಧವಾಗಿ, ಆರೋಗ್ಯಕರವಾಗಿ ಮತ್ತು ಮತ್ತಷ್ಟು ಸಮೃದ್ಧವಾಗಿರಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಇದಕ್ಕಾಗಿ ದೃಢಸಂಕಲ್ಪ ಮಾಡೋಣ ಎಂದು ಮೋದಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಇಂಟರ್ನ್ಯಾಷನಲ್ ಅರ್ಥ್ ಡೇ. ಭೂಮಿತಾಯಿ ದಿನ. ಈ ಭೂಮಿ ನಮ್ಮೆಲ್ಲರಿಗೂ ನೀಡುರವ ಸಂಪತ್ತು, ಆರೈಕೆ ಮತ್ತು ಒಡನಾಟವನ್ನು ನಾವೆಲ್ಲರೂ ಕೃತಜ್ಞತೆಯಿಂದ ಸ್ಮರಿಸೋಣ ಎಂದು ಪ್ರಧಾನಿ ಹೇಳಿದ್ದಾರೆ.
ಇಡೀ ವಿಶ್ವಕ್ಕೆ ಕೊರೊನಾ ಕಂಟಕವಾಗಿದ್ದು, ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ಧನ್ಯವಾದಗಳು ಎಂದು ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.