ಮುಂಬೈಯಲ್ಲಿ ಕನಿಷ್ಟ 30 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಮಾಧ್ಯಮದವರಿಗಾಗಿಯೇ ಏರ್ಪಡಿಸಲಾಗಿದ್ದ ವಿಶೇಷ ವೈದ್ಯಕೀಯ ಶಿಬಿರದಲ್ಲಿ 171 ಜನರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಇನ್ನಷ್ಟೆ ಪೂರ್ಣ ವರದಿ ಬರಬೇಕಿದೆ. ಆದರೆ, ಈವರೆಗೆ ಬಂದಿರುವ ವರದಿಗಳ ಪೈಕಿ ಕನಿಷ್ಟ 30 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ವಿನೋದ ಜಗದಾಳೆ ತಿಳಿಸಿದ್ದಾರೆ.
ಟಿವಿ ವರದಿಗಾರರು ಮತ್ತು ಕ್ಯಾಮರಾಮನ್ ಗಳೇ ಇದರಲ್ಲಿ ಹೆಚ್ಚಾಗಿದ್ದಾರೆ.
ಸಂಸದೆ ಪ್ರಿಯಾಂಕಾ ಚತುರ್ವೇದಿ ಮಾಧ್ಯಮದವರಿಗಾಗಿ ಏ.16, 17ರಂದು ವಿಶೇಷ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸಿದ್ದರು. ಅದರ ವರದಿ ಈಗ ಬರಲಾರಂಭಿಸಿದೆ.
ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈಗ ವರದಿ ಬಂದಿರುವ ಪ್ರಕಾರ ಸೋಂಕು ದೃಢಪಟ್ಟವರಿಗೆಲ್ಲ ಚಿಕಿತ್ಸೆ ಆರಂಭಿಸಲಾಗಿದೆ. ಇನ್ನೂ ವರದಿ ಬಾರದವರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಮಾಧ್ಯಮದವರಿಗಾಗಿಯೇ ಇನ್ನೊಂದು ವಿಶೇಷ ತಪಾಸಣೆ ಶಿಬಿರ ನಡೆಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಲ್ಲಿ ವಿನಂತಿಸಲಾಗಿದೆ.
ಮಾಧ್ಯಮದವರು ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸಲು ಮತ್ತು ಸೂಕ್ತ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.