ಮುಂಬೈ: ದೇಶ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ವಿರೋಧ ಪಕ್ಷ ಹೇಗೆ ವರ್ತಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೋರಿಸಿಕೊಟ್ಟಿದ್ದಾರೆ ಎಂದು ರಾಹುಲ್ ನಡೆಯನ್ನು ಶಿವಸೇನೆ ಮೆಚ್ಚಿಕೊಂಡಿದೆ.
ಈ ವಿಚಾರವಾಗಿ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ದೇಶದ ಹಿತಾಸಕ್ತಿಗಾಗಿ ರಾಹುಲ್ ಗಾಂಧಿ ಅವರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು, ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಕುಳಿತು ಚರ್ಚಿಸಬೇಕು. ರಾಹುಲ್ ಗಾಂಧಿ ಮತ್ತು ಮೋದಿ ಅವರ ರಾಜಕೀಯ ಹಿತಾಸಕ್ತಿಗಳು ಬೇರೆ ಇರಬಹುದು. ಆದರೆ ಇದು ಜಗಳವಾಡುವ ಸಮಯವಲ್ಲ ದೇಶವು ಒಗ್ಗಟ್ಟಿನಿಂದ ಈ ರೋಗದ ವಿರುದ್ಧ ಹೋರಾಡಬೇಕು ಎಂದು ಬರೆದುಕೊಂಡಿದೆ.
ಜನರಲ್ಲಿ ರಾಹುಲ್ ಗಾಂಧಿ ಬಗ್ಗೆ ಬೇರೆ ಅಭಿಪ್ರಾಯಗಳಿವೆ. ಹಾಗೆಯೇ ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆಯೂ ಬೇರೆ ಬೇರೆ ಅಭಿಪ್ರಾಯಗಳಿವೆ. ಬಿಜೆಪಿ ಪಾರ್ಟಿ ಅರ್ಧದಷ್ಟು ಯಶಸ್ಸನ್ನು ರಾಹುಲ್ ಗಾಂಧಿಯವರನ್ನು ತೆಗಳುವುದಿರಿಂದ ಪಡೆದುಕೊಂಡಿದೆ. ಇದು ಇಂದಿಗೂ ಮುಂದುವರಿದಿದೆ. ಆದರೆ ಈಗ ದೇಶದಲ್ಲಿರುವ ಬಿಕ್ಕಟ್ಟಿನ ನಡುವೆ ರಾಹುಲ್ ಗಾಂಧಿಯವರು ತೆಗೆದುಕೊಂಡ ನಿಲುವುಗಳನ್ನು ನಾವು ಪ್ರಶಂಸಿಸಬೇಕಾಗಿದೆ ಎಂದು ಶಿವಸೇನೆ ಹೇಳಿದೆ.
ದೇಶವು ಕೊರೊನಾ ವೈರಸ್ ನಿಂದ ಬಿಕ್ಕಟ್ಟಿನಲ್ಲಿ ಸಿಲುಕಿದ ಸಮಯದಲ್ಲಿ ರಾಹುಲ್ ಗಾಂಧಿ ಅವರು ವಿರೋಧ ಪಕ್ಷ ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಹುಲ್ ಗಾಂಧಿಯವರು ಈ ನಿಲುವುಗಳಿಂದ ಒಂದು ಮಾದರಿಯಾಗಿ ನಿಂತಿದ್ದಾರೆ. ಜೊತೆಗೆ ಮೊದಲಿನಿಂದಲೂ ಕೊರೊನಾ ವೈರಸ್ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ಕೊಡುತ್ತಾ ಬಂದಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತಿಳಿಸಿದೆ.
ಬಿಜೆಪಿಯವರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವ ತವಕದಲ್ಲಿ ಇದ್ದರೆ, ಆಗಲೇ ರಾಹುಲ್ ಗಾಂಧಿ ಕೊರೊನಾ ವೈರಸ್ ಅನ್ನು ನಿಭಾಯಿಸುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದರು. ಜೊತೆಗೆ ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳ ರಫ್ತು ಮಾಡುವುದನ್ನು ನಿಲ್ಲಿಸುವಂತೆ ರಾಹುಲ್ ಗಾಂಧಿ ಪದೇ ಪದೇ ಸರ್ಕಾರವನ್ನು ಒತ್ತಾಯಿಸುತ್ತಿದ್ದರು ಎಂದು ಸೇನಾ ತನ್ನ ಮುಖವಾಣಿಯಲ್ಲಿ ಬರೆದುಕೊಂಡಿದೆ.
ಗುರುವಾರ ಮಾತನಾಡಿದ್ದ ರಾಹುಲ್ ಗಾಂಧಿ, ಕೊರೊನಾ ವೈರಸ್ ದೇಶದ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಎರಡು ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಿದೆ. ಆರೋಗ್ಯದ ಜೊತೆಗೆ ಆರ್ಥಿಕತೆ ಮೇಲೆ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದರು. ಜೊತೆಗೆ ನಾನು ಈ ಸಮಯದಲ್ಲಿ ಕೇಂದ್ರ ಸರ್ಕಾರದ ತಪ್ಪುಗಳನ್ನು ಹುಡುಕಲು ಹೋಗುವುದಿಲ್ಲ. ಬದಲಿಗೆ ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದರು.
ಕೊರೊನಾ ವಿಚಾರದಲ್ಲಿ ಲಾಕ್ಡೌನ್ ಒಂದೇ ಮುಖ್ಯವಲ್ಲ. ಇದರೊಂದಿಗೆ ಕೊರೊನಾ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಹಾಟ್ಸ್ಪಾಟ್, ನಾನ್ ಹಾಟ್ಸ್ಪಾಟ್ ವಲಯಗಳಲ್ಲಿ ಕ್ಷಿಪ್ರವಾಗಿ ಟೆಸ್ಟಿಂಗ್ಗಳು ನಡೆಯಬೇಕು. ವೈರಸ್ ಹರಡುವ ವೇಗದಲ್ಲೇ ನಮ್ಮ ಪರೀಕ್ಷೆಗಳು ನಡೆದಾಗ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಅಂದಾಜು 350 ಟೆಸ್ಟ್ ಗಳು ನಡೆದಿದೆ. ಆದರೆ ಕೊರೊನಾ ವೈರಸ್ ಪ್ರಭಾವ ಮುಂದೆ ಇದು ಅತಿ ಕಡಿಮೆ ಟೆಸ್ಟ್ ಗಳಾಗಿದ್ದು, ಸರ್ಕಾರ ಟೆಸ್ಟಿಂಗ್ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದರು.