ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಿ, ಮಾನವ ಜೀವ ಸಂಕುಲವನ್ನು ಉಳಿಸಬೇಕೆಂದು ಹಾರೈಸಿ ಕೆ.ಆರ್.ಪೇಟೆ ಪಟ್ಟಣದ ಗ್ರಾಮದೇವತೆ ಶ್ರೀ ಮಾರಮ್ಮನವರ ದೇವಸ್ಥಾನದಲ್ಲಿ ಗ್ರಾಮದ ಮುಖಂಡರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ವಿಶ್ವದಾದ್ಯಂತ ಕೊರೋನಾ ಅಟ್ಟಹಾಸವು ಎಲ್ಲೆ ಮೀರಿದೆ. ನಿತ್ಯ ಸಾವಿರಾರು ಮಂದಿ ಕೊರೋನಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ಲಕ್ಷಾಂತರ ಮಂದಿ ರೋಗ ಪೀಡಿತರಾಗುತ್ತಿದ್ದಾರೆ ಹಾಗಾಗಿ ಕೊರೋನಾ ಮಹಾಮಾರಿಯನ್ನು ಹೋಗಲಾಡಿ ಮಾನವ ಸಂಕುಲವನ್ನು ಉಳಿಸಬೇಕೆಂದು ಗ್ರಾಮಸ್ಥರು ತಾಯಿ ಮಾರಮ್ಮ ದೇವತೆಯಲ್ಲಿ ಬೇಡಿಕೊಂಡರು. ಅಲ್ಲದೆ ಕೊರೊನಾ ಕಾಯಿಲೆಯು ದೇಶದಿಂದ ಹಾಗೂ ಪ್ರಪಂಚದಿಂದ ದೂರವಾಗಲಿ ಎಂದು ಅದ್ದೂರಿಯಾಗಿ ಮಾರಿ ಹಬ್ಬವನ್ನು ಆಚರಣೆ ಮಾಡುವುದಾಗಿ ಹರಕೆ ಹೊತ್ತುಕೊಂಡಿದ್ದು ವಿಶೇಷವಾಗಿತ್ತು. ಭಕ್ತರ ಕೋರಿಕೆಯಂತೆ
ತಾಯಿ ಮಾರಮ್ಮನು ಬಲಗಡೆ ಹೂವಿನ ಪ್ರಸಾದವನ್ನು ನೀಡಿ ಅನುಗ್ರಹಿಸಿದ್ದು ಕೊರೋನಾ ಸೋಂಕು ಕಡಿಮೆಯಾಗುವ ಶುಭ ಸೂಚನೆಯನ್ನು ದೇವಿಯು ನೀಡಿದ್ದು ವಿಶೇಷವಾಗಿತ್ತು.
ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಎಪಿಎಂಸಿ ಮಾಜಿಅಧ್ಯಕ್ಷ ಕೆ.ಎನ್.ಕೃಷ್ಣ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ರಾಮೇಗೌಡ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಹಣ್ಣಿನ ಅಂಗಡಿ ರಾಮಣ್ಣ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಕೆ.ಕೆ.ಜವರಯ್ಯ, ಕೆ.ಕೆ.ಕೃಷ್ಣ, ಪುರಸಭಾ ಸದಸ್ಯರಾದ ಕೆ.ಎಸ್.ಪ್ರಮೋದ್ಕುಮಾರ್, ಮಾಜಿ ಪುರಸಭಾ ಸದಸ್ಯರಾದ ಕೆ.ಆರ್.ಹೇಮಂತಕುಮಾರ್, ಹರಪ್ರಸಾದ್, ಯುವ ಮುಖಂಡ ಪ್ರಮೋದ್ ಸಜ್ಜನ್ ಮತ್ತಿತರರು ಭಾಗವಹಿಸಿದ್ದರು.