ಬೆಂಗಳೂರು : ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಯ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನಂದಿನಿಯಿಂದ ಯುವ ಪೀಳಿಗೆಯ ಗ್ರಾಹಕರನ್ನು ಸೆಳೆಯಲು ನಂದಿನಿ ಕೆಫೆ ಮೂ ಹೆಸರಿನ ಹವಾನಿಯಂತ್ರಿತ ಹೈಟೆಕ್ ನಂದಿನಿ ಐಸ್ಕ್ರೀಮ್ ಸ್ಕೂಪಿಂಗ್ ಕಮ್ ಪಾರ್ಲರ್ನ್ನು ತೆರೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ಮಹಾನಗರದ ಜಯನಗರ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ನಂದಿನಿ ಕೆಫೆ ಮೂ ಹೈಟೆಕ್ ಪಾರ್ಲರ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ತಕ್ಕಂತೆ ನಮ್ಮ ನಂದಿನಿ ಉತ್ಪನ್ನಗಳು ಸಹ ಸ್ಕೂಪ್ ಮಾದರಿಯಲ್ಲಿ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಕಾಫಿ ಡೇ ಮಾದರಿಯಲ್ಲಿ ನಂದಿನಿ ಕೆಫೆ ಮೂ ಪಾರ್ಲರ್ ಇನ್ನು ಮುಂದೆ ಗ್ರಾಹಕರನ್ನು ಸೆಳೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಸಪ್ಪೋಟಾ ಐಸ್ಕ್ರೀಮ್, ಹಲಸಿನ ಹಣ್ಣಿನ ಐಸ್ಕ್ರೀಮ್, ಲಿಚ್ಚಿ ಹಣ್ಣಿನ ಐಸ್ಕ್ರೀಮ್, ಮಾವಿನ ಹಣ್ಣಿನ ಐಸ್ಕ್ರೀಮ್, ಸೀಬೇ ಹಣ್ಣಿನ ಐಸ್ಕ್ರೀಮ್, ಸೀತಾಫಲ ಹಣ್ಣಿನ ಐಸ್ಕ್ರೀಮ್, ಸ್ಟ್ರಾಬೆರ್ರಿ ಹಣ್ಣಿನ ಐಸ್ಕ್ರೀಮ್, ಎಳೆನೀರಿನ ಐಸ್ಕ್ರೀಮ್, ವೆನಿಲ್ಲಾ ಫೆಸ್ಟ್ರೀ ಕೇಕ್, ಮಿಲ್ಕ್ ಶೇಕ್, ಫಿಜ್ಜಾ, ಬರ್ಗರ್ ಸೇರಿದಂತೆ ಹಲವು ಬಗೆಯ ತಿನಿಸುಗಳು ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ನಮ್ಮಲ್ಲಿ ದೊರೆಯಲಿವೆ. ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಕೆಫೆ ಮೂ ಪ್ರಾರಂಭಿಸಿದ್ದು, ಇದೇ ರೀತಿಯಾಗಿ ಬೆಂಗಳೂರಿನಲ್ಲಿ 10 ಸ್ಥಳಗಳಲ್ಲಿ ಪ್ರಾರಂಭಿಸುವ ಆಲೋಚನೆ ಹೊಂದಲಾಗಿದೆ ಎಂದು ಅವರು ಹೇಳಿದರು.
ಯುವ ಜನತೆಯನ್ನು ಗುರಿಯನ್ನಾಗಿಸಿಕೊಂಡು ನಂದಿನಿ ಹೊಸ ಸ್ವರೂಪ ಹೊಂದಲಿದೆ. ಬಹು ರಾಷ್ಟ್ರೀಯ ಕಂಪನಿಗಳ ಜೊತೆ ಪೈಪೋಟಿ ಹೊಂದಲು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇವುಗಳಲ್ಲಿ ಬರುವ ಲಾಭಾಂಶವನ್ನು ರೈತ ಸಮುದಾಯಕ್ಕೆ ಹಂಚಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಆಂಧ್ರದ ಜೊತೆ ಒಪ್ಪಂದ : ಅಂಗನವಾಡಿ ಮಕ್ಕಳಿಗೆ ಅನುಕೂಲವಾಗಲು ಆಂಧ್ರಪ್ರದೇಶ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ತಿಂಗಳು 55 ಲಕ್ಷ ಲೀಟರ್ ಯುಎಚ್ಟಿ/ಫ್ಲೆಕ್ಸಿ ಪ್ಯಾಕ್ ಹಾಲನ್ನು ಮಾರ್ಚ ತಿಂಗಳಿನಿಂದ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ತೆಲಂಗಾಣ, ಕೇರಳ ರಾಜ್ಯಗಳಿಗೂ ವಿಸ್ತರಣೆ ಮಾಡುವ ಉದ್ಧೇಶ ಹೊಂದಲಾಗಿದೆ ಎಂದು ಹೇಳಿದರು.
ನಂದಿನಿ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ಪನ್ನಗಳು ಸಹ ಅತ್ಯಂತ ಗುಣಮಟ್ಟದ್ದಾಗಿವೆ. ರೈತರ ಹಿತವೇ ನಮಗೆ ಮುಖ್ಯವಾಗಿದ್ದು, ಇಂದಿನಿಂದ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿರುವ ನಂದಿನಿ ಕೆಫೆ ಮೂ ಗ್ರಾಹಕರನ್ನು ಆಕರ್ಷಿಸುವಲ್ಲಿ ಸಫಲವಾದಲ್ಲಿ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತೆರೆಯುವ ಉದ್ಧೇಶ ಹೊಂದಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕೆಎಂಎಫ್ ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.