Breaking News
Home / ಜಿಲ್ಲೆ / ಸಂವಿಧಾನ ಕುರಿತ ಚರ್ಚೆಯಲ್ಲಿ ವಿವಾದಕ್ಕೆ ತೆರೆ ಎಳೆದ ಸಿಎಂ

ಸಂವಿಧಾನ ಕುರಿತ ಚರ್ಚೆಯಲ್ಲಿ ವಿವಾದಕ್ಕೆ ತೆರೆ ಎಳೆದ ಸಿಎಂ

Spread the love

ಬೆಂಗಳೂರು: ಸಂವಿಧಾನ ರಚನೆಯ ಸಕಲ ಗೌರವವೂ ಡಾ. ಬಿ.ಆರ್. ಅಂಬೇಡ್ಕರ್ ಅವರೊಬ್ಬರಿಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುವ ಮೂಲಕಮೂಲಕ ಸಂವಿಧಾನ ಮೂಲ ರಚನೆ ಯಾರು ಮಾಡಿದರು ಎಂಬ ವಿಷಯದಲ್ಲಿ ನಡೆಯುತ್ತಿದ್ದ ಚರ್ಚೆಗೆ ತೆರೆ ಎಳೆದ ಪ್ರಸಂಗ ನಡೆಯಿತು.

ಸಂವಿಧಾನ ಕುರಿತ ವಿಶೇಷ ಚರ್ಚೆಯ ಅಧಿವೇಶನದ ಎರಡನೇ ದಿನವಾದ ಇಂದು, ಸಂವಿಧಾನ ರಚನೆ, ಉದ್ದೇಶ, ಧೇಯ್ಯೋದ್ದೇಶಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
ಆರಂಭದಲ್ಲಿ ಸಚಿವ ಮಾಧುಸ್ವಾಮಿ ಈ ವಿಚಾರವಾಗಿ ಮಾತನಾಡಿ, ಸಂವಿಧಾನ ರಚನೆಗೆ ನಮ್ಮ ದೇಶದ ಉಪನಿಷತ್‌ಗಳು, ವೇದಗಳು ಪ್ರೇರಣೆಯಾಗಿವೆ.ನಮ್ಮ ದೇಶದ ಸಂವಿಧಾನ ಅತ್ಯುನ್ನತವಾಗಿದೆ ಎಂದರು.

ಕಾಂಗ್ರೆಸ್ ಸದಸ್ಯ ಎಚ್. ಕೆ. ಪಾಟೀಲ್ ಮಾತನಾಡಿ, ಸ್ಪೀಕರ್ ಅವರು ಸಂವಿಧಾನ ಕುರಿತು ನಿನ್ನೆ ಸುದೀರ್ಘ ಭಾಷಣ ಮಾಡಿದ್ದಾರೆ. ಸ್ಪೀಕರ್ ಅವರು ಸಂವಿಧಾನದ ವಿಷಯದ ಕುರಿತು ಭಾಷಣ ಮಾಡುವಾಗ ಕೆಲವು ಪ್ರಮುಖ ಅಂಶಗಳನ್ನು ಕೈಬಿಟ್ಟಿದ್ದಾರೆ. ಕಾಂಗ್ರೆಸ್, ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಹೋರಾಟಗಾರರನ್ನು ಭಾಷಣದಲ್ಲಿ ಪ್ರಸ್ತಾಪಿಸಿಲ್ಲ. ಸ್ಪೀಕರ್ ಅವರ ಪೂರ್ವಾಶ್ರಮದಿಂದ ಪ್ರಭಾವಿತಗೊಂಡಿರುವುದು ಭಾಷಣದಲ್ಲಿ ಸ್ಪಷ್ಟಗೊಂಡಿದೆ ಎಂದು ಎಚ್‌.ಕೆ.ಪಾಟೀಲ್ ಆಕ್ಷೇಪಿಸಿದರು.
ಅಲ್ಲದೇ ಸ್ಪೀಕರ್ ಅವರ ಭಾಷಣದ 7ನೇ ಪುಟದಲ್ಲಿ ಮೂಲತಃ ಮಂಗಳೂರಿನವರಾದ ಬಿ.ಎನ್. ರಾವ್ ಅವರ ಕೊಡುಗೆ ಅಪಾರವಾದುದು. ಅವರು ಭಾರತ ಸಂವಿಧಾನ ರಚನಾ ಸಭೆಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು . ಶ್ರೀಯುತರು ರಚಿಸಿದ ಸಂವಿಧಾನ ಮೂಲ ಕರಡು ಪ್ರತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು. ಈ ಮೂಲ ಕರಡನ್ನು ರಚನಾ ಸಭೆಯಲ್ಲಿ ಚರ್ಚಿಸಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತ್ವತ್ವದಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿ ಭಾರತೀಯ ಸರ್ವತೋಮುಖ ಅಭಿವೃದ್ಧಿಗಾಗಿ ಸಮಗ್ರವಾದ ಹಾಗೂ ಸಮರ್ಥವಾದ ಸಂವಿಧಾನವನ್ನು ರಚಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದು ಸರಿಯಲ್ಲ. ಡಾ.ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದರು. ಯಾವುದೇ ಮೂಲ ಕರಡು ಇರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಎಚ್. ಕೆ. ಪಾಟೀಲ್ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದಂತೆ ಸ್ಪೀಕರ್ ವಿಶ್ವೇಶ್ವರಯ್ಯಾ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ ಮಾತನಾಡಿ, ಉದ್ದೇಶಪೂರ್ವಕವಾಗಿ ಯಾವುದೇ ಅಂಶಗಳನ್ನು ಕೈಬಿಟ್ಟಿಲ್ಲ. ಆದರೆ ಸ್ಥಳದ ಅಭಾವದಿಂದ ಕೆಲವು ಅಂಶಗಳು ಕೈಬಿಟ್ಟಿರಬಹುದು. ತಪ್ಪಾಗಿದ್ದರೆ ತಿಳಿಸಿ, ಸರಿಪಡಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ್, ಇತಿಹಾಸ ತಿರುಚು ಪ್ರಯತ್ನವನ್ನು ಯಾರೂ ಮಾಡಬಾರದು. ನಮ್ಮ ಮುಂದಿನ ಪೀಳಿಗೆ ಇದನ್ನೇ ಇತಿಹಾಸ ಎಂದು ತಿಳಿದುಕೊಳ್ಳಬಾರದು. ಆದ್ದರಿಂದಲೇ ಈ ವಿಷಯ ಪ್ರಸ್ತಾಪಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್‌ ಸದಸ್ಯ ಪ್ರಿಯಾಂಕ್‌ ಖರ್ಗೆ ಮಧ್ಯ ಪ್ರವೇಶಿಸಿ ಮಾತನಾಡಿ, ಸಂದರ್ಶನವೊಂದರಲ್ಲಿ ಬಿ.ಎನ್‌.ರಾವ್ ಅವರು ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿದ್ದರು. ಹಾಗಾಗಿ ಅವರು ಬಿ.ಆರ್.ಅಂಬೇಡ್ಕರ್‌ ಅವರಿಗೆ ಭಾಷಾಂತರಕಾರಾಗಿ ಕೆಲಸ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ಅಂಬೇಡ್ಕರ್ ಸ್ವತಃ ಆಕ್ಸ್‌ಫರ್ಡ್‌ ನಲ್ಲಿ ಕಲಿತು ಬಂದವರು. ಇಂಗ್ಲೀಷ್‌ನಲ್ಲಿ ಪ್ರಭುತ್ವ ಸಾಧಿಸಿದ್ದರು. ಅವರಿಗೆ ಭಾಷಾಂತರಕಾರರ ಅಗತ್ಯವೇ ಇರಲಿಲ್ಲ. ಸಂವಿಧಾನ ರಚನೆಯ ಸಂಪೂರ್ಣ ಗೌರವ ಬಾಬಾ ಸಾಹೇಬ್‌ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಪ್ರತಿಪಾದಿಸಿದರು.

ಈ ವಿಷಯ ವಿವಾದಕ್ಕೆ ಕಾರಣವಾಗಬಹುದು ಎಂಬ ಆತಂಕದಿಂದ ಎದ್ದು ನಿಂತ ಬಿ.ಎಸ್.ಯಡಿಯೂರಪ್ಪ, ಸಂವಿಧಾನ ರಚನೆಯ ಸಕಲ ಗೌರವವೂ ಡಾ.ಬಿ.ಆರ್.ಅಂಬೇಡ್ಕರ್ ಅವರೊಬ್ಬರಿಗೇ ಸಲ್ಲಬೇಕು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಒಬ್ಬರೇ ಸಂವಿಧಾನ ಕರಡು ಸಿದ್ಧಪಡಿಸಿದ್ದರು. ದಮನಿತರು, ತುಳಿತಕ್ಕೆ ಒಳಗಾದವರಿಗೆ ನೆರವಾಗಬೇಕು, ಅವರನ್ನು ಮೇಲೆತ್ತಬೇಕು ಎಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು ಎಂದು ಹೇಳಿದ ಸಿಎಂ ಯಡಿಯೂರಪ್ಪ ಸಂವಿಧಾನ ಮೂಲ ರಚನೆ ಯಾರು ಮಾಡಿದರು ಎಂಬ ವಿಷಯದಲ್ಲಿ ನಡೆಯುತ್ತಿದ್ದ ಚರ್ಚೆಗೆ ತೆರೆ ಎಳೆದರು.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ