ರಾಯಬಾಗ: ಕರೋನಾ ಶಂಕಿತರನ್ನು ತಾಲೂಕಾಡಳಿತ ಕ್ವಾರಂಟೈನ್ಗಾಗಿ ಸಮೀಪದ ಚಿಂಚಲಿ ಪಟ್ಟಣದ ಮಾಯಕ್ಕಾದೇವಿ ಧರ್ಮಶಾಲೆ ವಸತಿ ನಿಲಯದಲ್ಲಿ ಇಡುವುದಕ್ಕೆ ಚಿಂಚಲಿ ಪಟ್ಟಣದ ಸಾರ್ವಜನಿಕರು, ಮುಖಂಡರು ವಿರೋಧ ವ್ಯಕ್ತಪಡಿಸಿದರು.
ಶುಕ್ರವಾರ ಬೆಳಿಗ್ಗೆ ಚಿಂಚಲಿ ಪಟ್ಟಣದ ಹೃದಯಭಾಗದಲ್ಲಿರುವ ಮಾಯಕ್ಕಾದೇವಿ ಧರ್ಮಶಾಲೆ ವಸತಿ ನಿಲಯಕ್ಕೆ ಕೊರೋನಾ ಶಂಕಿತ ಕುಟುಂಬಗಳನ್ನು ಕ್ವಾರಂಟೈನ್ಗಾಗಿ ಕರೆದು ತರುವ ಸುದ್ದಿ ತಿಳಿದು ವಸತಿ ನಿಲಯದ ಮುಂದೆ ನೂರಾರು ಸಾರ್ವಜನಿಕರು, ಮಹಿಳೆಯರು ಮುಖಂಡರು ಜಮಾವಣೆಗೊಂಡು ಯಾವುದೇ ಕಾರಣಕ್ಕೂ ಕೊರೋನಾ ಶಂಕಿತ ವ್ಯಕ್ತಿಗಳನ್ನು ಹಾಗೂ ಕುಟುಂಬದವರನ್ನು ಕರೆತರಬಾರದೆಂದು ವಿರೋಧ ವ್ಯಕ್ತಪಡಿಸಿದರು.
ಮಾಯಕ್ಕಾದೇವಿ ದೇವಸ್ಥಾನದ ಟ್ರಸ್ಟ್ ಕಮೀಟಿ ಅಧ್ಯಕ್ಷ ಜಿತೇಂದ್ರ ಜಾಧವ ಸಾರ್ವಜನಿಕರ ಪರವಾಗಿ ಮಾತನಾಡಿ, ಚಿಂಚಲಿ ಪಟ್ಟಣದಲ್ಲಿ ಒಂದೂ ಕೊರೋನಾ ಪ್ರಕರಣ ದಾಖಲಾಗಿರುವುದಿಲ್ಲ. ಆದ್ದರಿಂದ ಈ ಪ್ರದೇಶ ಗ್ರೀನ್ ಝೋನ್ನಲ್ಲಿದೆ, ಕ್ವಾರಂಟೈನ್ಗಾಗಿ ಕರೋನಾ ಶಂಕಿತ ವ್ಯಕ್ತಿಗಳನ್ನು ಇಲ್ಲಿಗೆ ಕರೆತರುವುದರಿಂದ ಸುತ್ತಲಿನ ಪ್ರದೇಶದ ಜನರು ಆತಂಕಗೊಳ್ಳುವ ಸಂಭವ ಹೆಚ್ಚಿದೆ. ಅಲ್ಲದೇ ತಾಲೂಕಿನ ಸೋಂಕಿತ ಪ್ರದೇಶಗಳಲ್ಲಿಯೇ ಕ್ವಾರಂಟೈನ್ಗಾಗಿ ಸಾಕಷ್ಟು ವ್ಯವಸ್ಥೆ ಇದ್ದು ಅಲ್ಲಿಯೇ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಸ್ಥಳಕ್ಕೆ ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಭೇಟಿ ನೀಡಿ, ರಾಯಬಾಗ ಹಾಗೂ ಕುಡಚಿಯಲ್ಲಿ ಜೀವಕ್ಕೆ ಹಾನಿಯಾಗುವಂತ ಯಾವುದೇ ರೋಗಿಗಳಿಲ್ಲ. ಆರೋಗ್ಯವಂತ ಅಮಾಯಕರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪಾಸಿಟಿವ್ ಬಂದ ಸೋಂಕಿತರನ್ನು ರಾಯಬಾಗ ತಾಲೂಕಿನ್ನಲೇ ಇಡದೇ ನೇರವಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿಕೊಂಡು ಸಾರ್ವಜನಿಕರ ಮನವೊಲಿಸಲು ಪ್ರಯತ್ನಿಸಿ, ಬಳಿಕ ಪರಿಸ್ಥಿತಿಯನ್ನು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕೊನೆಗೆ ಬೇರೆ ಕಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದೆಂದು ಹೇಳಿದರು.
ಪ.ಪಂ.ಸದಸ್ಯ ಅಂಕುಶ ಜಾಧವ ಮಾತನಾಡಿ, ಚಿಂಚಲಿ ಪಟ್ಟಣ: “ಧರ್ಮಶಾಲೆ ಪಟ್ಟಣದ ಮಧ್ಯ ಭಾಗದಲ್ಲಿ ಇರುವುದರಿಂದ ಇಲ್ಲಿನ ಜನರು ಭಯಭೀತರಾಗುತ್ತಾರೆ. ಪಟ್ಟಣದಲ್ಲಿ ಇನ್ನುವರೆಗೂ ಒಂದೂ ಪ್ರಕರಣ ಇಲ್ಲದಿರುವುದರಿಂದ ಅಧಿಕಾರಿಗಳಿಗೆ ಬೇರೆ ಕಡೆಗೆ ಕ್ವಾರಂಟೈನ್ ಮಾಡಲು ಮನವಿ ಮಾಡಿದ್ದಕ್ಕೆ ಸ್ಪಂದಿಸಿದ್ದಾರೆ.” ಎಂದರು
ರಾಯಬಾಗ ಸಿಪಿಐ ಕೆ.ಎಸ್.ಹಟ್ಟಿ, ಪಪಂ ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ಸ್ಥಳೀಯ ವೈದ್ಯಾಧಿಕಾರಿ ಜೀವನ ಹೊಸಟ್ಟಿ ಹಾಗೂ ಅನೇಕ ಮುಖಂಡರು ಇದ್ದರು.