Breaking News

ಮೆಟ್ರೋಗೆ ಬಸವಣ್ಣ ಅವರ ಹೆಸರಿಡಬೇಕು.:ಸಚಿವ ಎಂ ಬಿ ಪಾಟೀಲ್

Spread the love

ಬೆಂಗಳೂರು: ನಿಶ್ವಿತವಾಗಿ ಮೆಟ್ರೋಗೆ ಜಗಜ್ಯೋತಿ ಬಸವಣ್ಣ ಅವರ ಹೆಸರಿಡಬೇಕು. ಇದು ಜನರ ಒತ್ತಾಯ, ಹಾಗೆ ನನ್ನ ಒತ್ತಾಯವೂ ಇದೆ ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.

 

ಮೆಟ್ರೋಗೆ ಬಸವೇಶ್ವರರ ಹೆಸರಿಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿದರು. ಅವರ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದೇವೆ. ಬಹಳ ಒಳ್ಳೆಯ ಕೆಲಸ ಮಾಡಿದ್ದೇವೆ. ಇನ್ನೋರ್ವ ಮಹಾತ್ಮರು ಬಸವೇಶ್ವರ. 12ನೇ ಶತಮಾನದಲ್ಲಿ ಸಮಾನತೆ ತಂದವರು. ಅನುಭವ ಮಂಟಪದ ಪರಿಕಲ್ಪನೆ ತಂದವರು. ಜಗತ್ತಿಗೆ ಪ್ರಥಮ ಪಾರ್ಲಿಮೆಂಟ್ ಕೊಟ್ಟವರು. ಅವರು ನಮ್ಮ ನಾಯಕರು. ಹೀಗಾಗಿ ಮೆಟ್ರೋಗೆ ಅವರ ಹೆಸರು ಇಟ್ಟರೆ ಸೂಕ್ತ. ಇದು ಜನರ ಬೇಡಿಕೆಯಾಗಿದೆ. ಈ ಬಗ್ಗೆ ಸಿಎಂ‌ ಜೊತೆ ಚರ್ಚೆ ಮಾಡ್ತೇವೆ ಎಂದರು.

ವಿಜಯಪುರ ಜಿಲ್ಲೆಗೆ ಬಸವೇಶ್ವರರ ಹೆಸರಿಗೆ ಸಚಿವ ಶಿವಾನಂದ ಪಾಟೀಲ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಕೆಲವು ಸಂಘಟನೆಗಳಿಂದ ಬಸವೇಶ್ವರ ನಗರ ಹೆಸರಿಡುವಂತೆ ಒತ್ತಾಯವಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ. ಬಸವೇಶ್ವರರ ಹೆಸರು ಇಡಲು ಯಾರ ತಕರಾರಿಲ್ಲ. ಸಾಧಕ ಬಾಧಕಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಯಾರ ವಿರೋಧವೂ ಇಲ್ಲ, ತಾಂತ್ರಿಕ ಸಮಸ್ಯೆ ಇದೆ. ಅದರ ಕುರಿತು ಚಿಂತನೆ ಮಾಡುತ್ತಾ ಇದ್ದೇವೆ ಎಂದು ಹೇಳಿದರು.

ಊಟಕ್ಕೆ ಕೂತಾಗ ರಾಜಕೀಯ ಚರ್ಚೆ ಆಗುತ್ತೆ: ಗೃಹ ಸಚಿವ ಜಿಪರಮೇಶ್ವರ್​ ನಿವಾಸದಲ್ಲಿ ಡಿನ್ನರ್ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ ಬಿ ಪಾಟೀಲ್​ ಅವರು, ಡಾ. ಜಿ ಪರಮೇಶ್ವರ್ ಅವರು ಸಿಎಂ ಅವರನ್ನು ಕರೆಯುತ್ತಿದ್ದರು. ಮೊನ್ನೆ ಸಿಎಂ ಹೋಗಿದ್ದಾರೆ. ಎಷ್ಟೋ ಬಾರಿ ನಾನು ಕೂಡ ಕರೆದಿದ್ದೇನೆ. ನಾನು ಕರೆದಾಗ ಬಂದಿದ್ದರು. ಅದೇ ರೀತಿ ಪರಮೇಶ್ವರ್ ಮನೆಗೆ ಹೋಗಿದ್ದಾರೆ. ಅದರಲ್ಲಿ ಏನು ತಪ್ಪಿದೆ, ಊಟಕ್ಕೆ ಹೋಗೋದು ತಪ್ಪಾ?. ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆ ಆಗಿರಬಹುದು. ಊಟಕ್ಕೆ ಕೂತಾಗ ರಾಜಕೀಯ ಚರ್ಚೆ ಆಗಿರುತ್ತೆ ಎಂದು ತಿಳಿಸಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದು ನಮ್ಮ ಯಾರ ಕೈಯಲ್ಲೂ ಇಲ್ಲ. ನನ್ನ ಒಳಗೊಂಡು ಶಾಸಕರಾಗಿರಬಹುದು ಸಚಿವರಾಗಿರಬಹುದು. ಏನು ಬದಲಾವಣೆ ಆಗಬೇಕೋ ಅದನ್ನು ಹೈಕಮಾಂಡ್ ಮಾಡುತ್ತೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾಡುತ್ತಾರೆ. ಸಿಎಂ, ಡಿಸಿಎಂ ಸೇರಿ ನಿರ್ಧಾರ ಕೈಗೊಳ್ಳುತ್ತಾರೆ. ಎಲ್ಲಾ ಹಿರಿಯ ನಾಯಕರು ಸೇರಿ ನಿರ್ಧಾರ ಮಾಡ್ತಾರೆ. ಕಾಲ ಕಾಲಕ್ಕೆ ಏನು ಆಗಬೇಕು ನಿರ್ಧಾರ ಆಗುತ್ತೆ. ಯಾರು ಹೇಳಿಕೆ ಕೊಟ್ಟರು ಅದು ವೈಯುಕ್ತಿಕ ಹೇಳಿಕೆ ಎಂದರು.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ