Breaking News

ಬರ ಪರಿಹಾರ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಸಿಎಂ ಸಿದ್ದರಾಮಯ್ಯ ಆರೋಪ

Spread the love

ಮಂಗಳೂರು: ಬರಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

 

ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಇವತ್ತಿನವರೆಗೆ ಒಂದು ರೂಪಾಯಿ ಕೊಟ್ಟಿಲ್ಲ. ನಾವು ಎರಡು ಬಾರಿ ಮನವಿ ಕೊಟ್ಟೆವು. ಬರ ಪರಿಹಾರ ವೀಕ್ಷಣೆ ಮಾಡಲು ಕೇಂದ್ರದ ತಂಡ ಬಂದಿದೆ. ಪರಿಶೀಲನೆ ಮಾಡಿ 136 ತಾಲೂಕುಗಳಲ್ಲಿ 116 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದರು. ನಾವು 13,910 ಕೋಟಿ ರೂ. ಕೇಳಿದ್ದೇವೆ. 33,000 ಕೋಟಿ ಹಾನಿಯಾಗಿದೆ. ಇವತ್ತಿನವರೆಗೆ ಕೇಂದ್ರ ಸರ್ಕಾರ ನಯಾ ಪೈಸೆ ಕೊಟ್ಟಿಲ್ಲ. ಅಷ್ಟು ಮಾತ್ರವಲ್ಲದೆ ನಮ್ಮ ಮಂತ್ರಿಗಳು ಹೋದರೆ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಕೇಂದ್ರ ಸರಕಾರ ರಾಜ್ಯ ಸರಕಾರದ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದೆ” ಎಂದರು.

ನಿಗಮ ಮಂಡಳಿ ನೇಮಕದ ಪ್ರಕ್ರಿಯೆ ಆಗುತ್ತಿದೆ. ಮೊದಲ ಹಂತದಲ್ಲಿ ಶಾಸಕರಿಗೆ ಚೇರ್ ಮೆನ್ ಮತ್ತು ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ, ಮಾಜಿ ಶಾಸಕರಿಗೆ ಕೊಡುತ್ತೇವೆ. ಅತಿ ಶೀಘ್ರದಲ್ಲಿ ನೇಮಕ ಆಗಲಿದೆ ಎಂದು ತಿಳಿಸಿದರು. ಹಾಗೆ ತನ್ನನ್ನು ಕಲೆಕ್ಷನ್ ಮಾಸ್ಟರ್ ಎಂದ ಶಾಸಕ ಹರೀಶ್ ಪೂಂಜಾ ಎಂಎಲ್‌ಎ ಆಗಿದ್ದು ಮೊನ್ನೆ. ನಾನು 1983 ರಲ್ಲಿ ಎಂಎಲ್​ಎ ಆದೆ. 1985 ರಲ್ಲಿ ಮಂತ್ರಿ ಆದೆ. ಆದರೆ ಯಾರು ನನ್ನನ್ನು ಆ ರೀತಿ ಕರೆದಿಲ್ಲ. ಹರೀಶ್ ಪೂಂಜಾ ರಾಜಕೀಯದ ಬಚ್ಚ. ಅದನ್ನು ಬಿಜೆಪಿ ಸರಕಾರಕ್ಕೆ, ಬಿಜೆಪಿ ಮುಖ್ಯಮಂತ್ರಿಗಳಿಗೆ ಹೇಳಲಿ, ನಮಗಲ್ಲ ಎಂದು ತಿಳಿಸಿದರು.

ಕಾಂಗ್ರೆಸ್​ನವರಿಗೆ ಬಿಜೆಪಿ ಆಫರ್​ ಬಂದಿರುವ ವಿಚಾರದ ಬಗ್ಗೆ ಶಾಸಕ ರವಿ ಅವರಲ್ಲಿ ಕೇಳಬೇಕು. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಬಿಜೆಪಿ ಅವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನಮಗಿರುವ ಮಾಹಿತಿ. 50 ಕೋಟಿ ರೂ. ಕೊಟ್ಟು ಆಫರ್ ಮಾಡುತ್ತಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.

ಗೃಹ ಸಚಿವ ಜಿ ಪರಮೇಶ್ವರ್​ ಮನೆಯಲ್ಲಿ ಊಟಕ್ಕೆ ಕರೆದಿದ್ದು, ನಾನು ಹೋಗಿದ್ದೆ. ಅದಕ್ಕೆ ಮಸಾಲೆ ಯಾಕೆ ಹಾಕುವುದು. ನನಗೆ, ಮಹಾದೇವಪ್ಪ, ಸತೀಶ್ ಜಾರಕಿಹೊಳಿಗೆ ಊಟಕ್ಕೆ ಕರೆದಿದ್ದರು. ಲೋಕಾಭಿರಾಮವಾಗಿ ಮಾತಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ವಿನಾಕಾರಣ ವಿಮರ್ಶೆಗಳನ್ನು ‌ಮಾಧ್ಯಮಗಳು ಮಾಡುತ್ತಿವೆ ಎಂದರು. ಇನ್ನು, ಕಾರ್ಕಳದ ಪರಶುರಾಮ ಪ್ರತಿಮೆಯ ಅಸಲಿತನದ ವಿಚಾರದಲ್ಲಿ ತನಿಖೆ ನಡೆಸೋಣ ಎಂದು ಸಿಎಂ ಹೇಳಿದರು.


Spread the love

About Laxminews 24x7

Check Also

ಅಂಗನವಾಡಿಗೆ ನೇಮಕ: ಅರ್ಜಿ ಆಹ್ವಾನ

Spread the loveಖಾನಾಪುರ: ತಾಲ್ಲೂಕಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿ ಇರುವ ನಾಲ್ವರು ಅಂಗನವಾಡಿ ಕಾರ್ಯಕರ್ತೆಯರು ಮತ್ತು 21 ಸಹಾಯಕಿಯರ ನೇಮಕಾತಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ