ಬೆಂಗಳೂರು : ರಾಜ್ಯ ಕಾಂಗ್ರೆಸ್ ಆಡಳಿತ ಸಂಪೂರ್ಣವಾಗಿ ದೆಹಲಿಯಿಂದ ನಡೆಯುತ್ತಿದೆ. ಇಡೀ ಸಚಿವ ಸಂಪುಟವೇ ಎಐಸಿಸಿ ಕಚೇರಿ ಸಭೆಯಲ್ಲಿ ಭಾಗಿಯಾಗಿರುವುದೇ ಇದಕ್ಕೆ ನಿದರ್ಶನ. ರಾಜ್ಯದಲ್ಲಿ ಸಚಿವ ಸಂಪುಟವೇ ಸುಪ್ರೀಂ, ಅಂತಹ ಸಂಪುಟವನ್ನೇ ಎಐಸಿಸಿ ಅಡಿಯಾಳಾಗಿಸಿ ರಾಜ್ಯದ ಜನತೆಗೆ ಸಿದ್ದರಾಮಯ್ಯ ಸರ್ಕಾರ ಅಪಮಾನ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಆಡಳಿತಾರೂಢ ಪಕ್ಷವೊಂದು ಇಡೀ ಸಚಿವ ಸಂಪುಟವನ್ನು ದೆಹಲಿಗೆ ತೆಗೆದುಕೊಂಡು ಹೋಗಿ ಈ ರೀತಿ ಹೈಕಮಾಂಡ್ ಮುಂದೆ ತಲೆಬಾಗುವ ಕೆಲಸ ಆಗಿರುವುದು ಬಹಳ ವಿರಳ. ಮೊದಲ ದಿನದಿಂದಲೂ ಹೈಕಮಾಂಡ್ ನಿರ್ದೇಶನವನ್ನು ಪಾಲಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗುವುದು. ಇಡೀ ಸಂಪುಟ ಎಐಸಿಸಿಗೆ ಹೋಗಿ ಸಭೆ ಮಾಡುವುದು ನೋಡಿದರೆ ಇದು ಸ್ಪಷ್ಟ ಬಹುಮತ ಕೊಟ್ಟ ರಾಜ್ಯದ ಜನತೆ ಅಪಮಾನ ಮಾಡಿದಂತಾಗಿದೆ. ಎಲ್ಲದರಲ್ಲಿಯೂ ಹೈಕಮಾಂಡ್ ಹಸ್ತಕ್ಷೇಪ ನಡೆಯುತ್ತಿದೆ. ಇಲ್ಲಿಯ ಅವ್ಯವಹಾರ ನಿಯಂತ್ರಣ ಮಾಡಲಾಗದ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆದ ಮೇಲೆ ದಿಲ್ಲಿಯಿಂದ ಕರ್ನಾಟಕದ ಆಡಳಿತ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.