ಚನ್ನಮ್ಮನ ಕಿತ್ತೂರು: ಅತ್ತ ರಾಜುವಿನ ಗಾಳಿಪಟ, ಇತ್ತ ಚಂದ್ರಿಕಾಳ ಗಾಳಿಪಟ, ರಮ್ಯ ಕೈಯಲ್ಲಿ ದಾರದ ಉಂಡೆ, ಉಸ್ತಾದನ ಕೈಯಲ್ಲಿ ಬಾಲಂಗೋಚಿ, ಸೂತ್ರ ಹರಿದು ಮಾಯವಾಯಿತು ಪರಮೇಶಿಯ ಪಟ, ಅದ ನೋಡಿ ಹೋಯ್… ಎಂದು ಕೂಗಿದ ಚಿಣ್ಣರ ದಂಡು.
‘
ವಿವಿಧ ಶಾಲೆಗಳಿಂದ ಬಂದಿದ್ದ ನೂರಾರು ಮಕ್ಕಳಿಗೆ ಬಣ್ಭಬಣ್ಣದ ಪಟಗಳನ್ನು ಉಚಿತವಾಗಿ ನೀಡಲಾಯಿತು. ಪಟ ಮತ್ತು ದಾರದ ಉಂಡೆಗಳು ಕೈಗೆ ಸಿಕ್ಕಿದ್ದೇ ತಡ ಚಿಣ್ಣರು ನಾ ಮುಂದು, ತಾ ಮುಂದು ಎಂದು ಓಡಾಡಿ ಪಟ ಹಾರಿಸಿದರು. ಶಿಕ್ಷಕ- ಶಿಕ್ಷಕಿಯರು ಕೂಡ ಮಕ್ಕಳೊಂದಿಗೆ ಮಕ್ಕಳಾಗಿ ಪಟಗಳನ್ನು ಹಾರಿಸಿ, ಬಾಲ್ಯಕ್ಕೆ ಜಾರಿದರು. ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರೂ ಪಟ ಹಾರಿಸಿ ಮಗುವಾದರು. ಗಣ್ಯರು- ಚಿಣ್ಣರು ಒಂದಾಗಿ ಸಂಭ್ರಮಿಸಿದರು.
ಪ್ರಾತ್ಯಕ್ಷಿಕೆ: ಆಕಸ್ಮಿಕ ಬೆಂಕಿ ಹೊತ್ತಿಕೊಂಡಾಗ ಕೈಗೊಳ್ಳುವ ಕ್ರಮಗಳ ಬಗ್ಗೆ ಕಿತ್ತೂರಿನ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕರಾದ ಮಂಜಪ್ಪ ತೊಲಗಿ, ಸಾಗರ ಪಾಟೀಲ, ರಮೇಶ ಪೂಜೇರ, ಅಗ್ನಿ ಶಾಮಕ ವಾಹನ ಚಾಲಕರಾದ ಬಸವರಾಜ ಇಂಚಲ, ರಾಮಪ್ಪ ಇಂಗಳಗಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸುತ್ತ ಸೇರಿದ ಚಿಣ್ಣರ ದಂಡು ಕೌತುಕದಿಂದ ಅಣಕು ಪ್ರದರ್ಶನ ವೀಕ್ಷಿಸಿತು.
ಕೊನೆಗೆ ಕಾರಂಜಿ ಕುಣಿತ ಮಕ್ಕಳ ಮನ ಸೆಳೆಯಿತು. ಬಾಲಕ- ಬಾಲಕಿಯರೆಲ್ಲ ಮುಗಿಬಿದ್ದ ಕಾರಂಜಿ ಕೆಳಗೆ ಕುಣಿದು ಕುಪ್ಪಳಿಸಿದರು. ಹೋಯ್ ಎಂದು ಕೂಗಾಡಿ ಖುಷಿ ಹೊರಚೆಲ್ಲಿದರು. ತೋಯ್ದ ಬಟ್ಟೆಗಳಲ್ಲೇ ಆಡುತ್ತ, ಹಾಡುತ್ತ, ನಲಿಯುತ್ತ ಮನೆಯತ್ತ ಹೆಜ್ಜೆ ಹಾಕಿದರು.
ಉದ್ಘಾಟನೆ: ತಹಶೀಲ್ದಾರ್ ರವೀಂದ್ರ ಹಾದಿಮನಿ ಮಕ್ಕಳಿಗೆ ಪಟ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಾತತ್ವ ಇಲಾಖೆಯ ಕ್ಯುರೇಟರ್ ರಾಘವೇಂದ್ರ, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎ.ಎಸ್. ಪೂಜಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ನಂದಿಹಳ್ಳಿ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ನ ಜಾಹೀರಾತು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ದಿವಾಕರ ಭಟ್, ಪ್ರಸಾರಾಂಗದ ಪ್ರಾದೇಶಿಕ ವ್ಯವಸ್ಥಾಪಕ ರವಿ ಹೆಗಡೆ ವೇದಿಕೆ ಮೇಲಿದ್ದರು.