ಬೆಳಗಾವಿ: ಮನಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಕುರಿತು ನಡೆದ ಘಟನೆ ಸತ್ಯವನ್ನು ತಿಳಿಯದೆ ರಾಜ್ಯ ಸರ್ಕಾರದ ವಿರುದ್ಧ ಟ್ವಿಟ್ ಮಾಡಿದ್ದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ರ್ಯಾಲಿ ನಡೆಸಿ ಶಾಸಕಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯ ಸರ್ಕಾರ ಗಡಿಭಾಗದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಕೋಟ್ಯಾಂತರ ರೂಪಾಯಿ ಅನುದಾನ ಕೊಟ್ಟಿದೆ. ಬೆಳಗಾವಿ ಗ್ರಾಮೀಣದಲ್ಲೂ ಅತೀ ಎತ್ತರದ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ಅನುದಾನ ನೀಡಿದ್ದು, ಶಿವಾಜಿ ಮಹಾರಾಜರಿಗೆ ಗೌರವ ನೀಡುವ ವಿಷಯದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಂದ ಪಾಠ ಕಲಿಯಬೇಕಾಗಿಲ್ಲ ಕರವೇ ಕಾರ್ಯಕರ್ತರು ಕಿಡಿ ಕಾರಿದರು.
ಮನಗುತ್ತಿಯಲ್ಲಿ ನಡೆದ ಘಟನೆಯಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಸರ್ಕಾರದ ವಿರುದ್ಧ ಟ್ವೀಟ್ ಮಾಡಿರುವ ಅಂಜಲಿ ನಿಂಬಾಳ್ಕರ್ ಬಹಿರಂಗ ಕ್ಷಮೆಯಾಚಿಸದಿದ್ದರೆ, ಕರವೇ ಕಾರ್ಯಕರ್ತರು ಅವರ ಮನೆ ಎದುರು ಧರಣಿ ಮಾಡಬೇಕಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದರು.
ರಾಜ್ಯ ಸಂಚಾಲಕ ಮಹಾದೇವ ತಳವಾರ, ದಶರಥ ಬನೋಶಿ, ಆರೋಗ್ಯಪ್ಪಾ ಪಾದನಕಟ್ಟಿ, ಸುರೇಶ ಗವಣ್ಣವರ, ರಾಮಾ ವಣ್ಣೂರ, ಗಣೇಶ ರೋಕಡೆ, ಹೊಳೆಪ್ಪಾ ಸುಲದಾಳ, ವಿಜಯ ಹಲಕರ್ಣಿ, ಸಂಪತ್ತ್ ಸಕ್ರೆನ್ನವರ, ಸತೀಶ್ ಗಾಡಿವಡ್ಡರ್, ರಮೇಶ್ ಯರಗಣ್ಣವರ,ಕಿರಣ ಚವ್ಹಾಣ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.