ಬೆಂಗಳೂರು, ಏ.22-ಕೊರೋನಾದಿಂದಾಗಿ ಲಾಕ್ ಡೌನ್ ಮಾಡಿರುವುದರಿಂದ ರಾಜ್ಯದಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದರೆ ರೈತರಿಗೆ 5 ಸಾವಿರ ಕೋಟಿ ರೂ ಪ್ಯಾಕೇಜ್ ಕೊಡುತ್ತಿದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ನಾವು ಕೊಟ್ಟ ಸಲಹೆಯನ್ನ ಪರಿಗಣಿಸುತ್ತಿಲ್ಲ. ರೈತರ ವಿಚಾರದಲ್ಲಿ ಯಾರು ಟೀಕೆ ಮಾಡಬೇಡಿ. ನಾನು ರೈತರ ಕಷ್ಟದಲ್ಲಿ ನೆರವಿಗೆ ಬಂದು ಹಲವರಿಗೆ ಸಹಾಯ ಮಾಡಿದ್ದೇನೆ. ಈ ಸಂದರ್ಭದಲ್ಲಿ ಯಾರು ಟೀಕೆ ಮಾಡಬೇಡಿ ಎಂದು ರಾಮನಗರದಲ್ಲಿ ಹೆಚ್ಡಿಕೆ ರಾಜ್ಯ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಸರ್ಕಾರದ ಆರೋಗ್ಯ ತಪಾಸಣಾ ಕಿಟ್ ನಲ್ಲಿ ಲೋಪದೋಷ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ವಪಕ್ಷ ಸಭೆ ಕರೆದಾಗಲೇ ಕಳೆದ 22 ದಿನಗಳ ಹಿಂದೆಯೇ ಈ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೆ. ನೀವು ತರಿಸುತ್ತಿರುವ ಕಿಟ್ ಗಳು ಕಳಪೆ ಇದ್ದಾವೆ.
ಈ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ಸಲಹೆ ಕೊಟ್ಟಿದ್ದೆ ಈಗ ಕೇಂದ್ರ ಸರ್ಕಾರ ಅದರಲ್ಲಿ ಲೋಪವಿದೆ ಎರಡು ದಿನ ತಪಾಸಣೆ ನಿಲ್ಲಿಸಿ ಎಂದಿದ್ದಾರೆ. ಹಾಗಾಗಿ ಸರ್ಕಾರ ಯಾವುದೇ ಲೋಪಕ್ಕೆ ಅವಕಾಶ ಕೊಡಬಾರದು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಕೊರೋನಾ ಸಂದರ್ಭದಲ್ಲಿ ಮಣ್ಣಿನ ಮಕ್ಕಳು ಎಲ್ಲಿದ್ದಾರೆ ಎಂದಿದ್ದ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅವರಿಂದ ಹೇಳಿಸಿಕೊಳ್ಳಬೇಕಿಲ್ಲ. ಅವರು 20 ಸಾವಿರ ರೂಪಾಯಿಯ ತರಕಾರಿ ಖರೀದಿ ಮಾಡಿ ಪ್ರಚಾರ ಪಡಿತಾರೆ ಎಂದರು. ನಾನು ರಾಮನಗರ – ಚನ್ನಪಟ್ಟಣ ಕ್ಷೇತ್ರಕ್ಕೆ 5 ಕೋಟಿ ವೆಚ್ಚದ ಆಹಾರ ಸಾಮಗ್ರಿ ಕೊಡ್ತಿದ್ದೇನೆ.
ಮಣ್ಣಿನ ಮಕ್ಕಳು ಅಂತಾ ನಾವು ಬಿರುದಾಕಿಕೊಂಡಿಲ್ಲ. ನಾಡಿನ ಜನ ನಮಗೆ ಕೊಟ್ಟಿರುವ ಬಿರುದು. ಮಣ್ಣಿನ ಮಕ್ಕಳು ಮನೆಯಲ್ಲಿ ಮಲಗಲ್ಲ, ಇವರಿಂದ ಕಲಿಯಬೇಕಿಲ್ಲ ಬಾಲಕೃಷ್ಣ ಹೆಸರೇಳದೆ ಹೆಚ್ಡಿಕೆ ಟಾಂಗ್ ಕೊಟ್ಟರು.
ರಾಮನಗರದಲ್ಲಿ ಟಾಂಗ್ ಕೊಟ್ಟ ಮಾಜಿ ಸಿಎಂ ರಾಮನಗರ ಜೈಲಿಗೆ ಪಾದರಾಯನಪುರದ ವಿಚಾರಣಾಧೀನ ಖೈದಿಗಳು ಶಿಫ್ಟ್ ವಿಚಾರದ ಬಗ್ಗೆ ಸಿಎಂ, ಗೃಹಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಯಾಕೆ ಈ ನಿರ್ಧಾರ ಮಾಡಿದ್ದೀರಿ, ಈ ಸಲಹೆ ಕೊಟ್ಟವರು ಯಾರು ಎಂದು ಕೇಳಿದ್ದೇನೆ. ಜನ ನನಗೆ ಫೋನ್ ಮಾಡಿ ಈ ಬಗ್ಗೆ ವಿರೋಧ ಮಾಡ್ತಿದ್ದಾರೆ ಎಂದು ಹೇಳಿದ್ದೇನೆ.
ಬೆಂಗಳೂರಿನಲ್ಲೇ ಸರ್ಕಾರಿ ಹಾಸ್ಟೆಲ್ ನಲ್ಲಿ, ಆಸ್ಪತ್ರೆಗಳಲ್ಲಿ, ಕಲ್ಯಾಣಮಂಟಪದಲ್ಲಿ ಇರಿಸಬಹುದಿತ್ತು. ಸಿಎಂ ಹಾಗೂ ಗೃಹಮಂತ್ರಿಗಳಿಗೆ ಉದ್ಧಟತನ, ಅಧಿಕಾರದಲ್ಲಿದ್ರೆ ಏನ್ ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ.
ನಾನು ಸಾರ್ವಜನಿಕರಿಗೆ ಅನಾನುಕೂಲವಾಗಲು ಅವಕಾಶ ಕೊಡಲ್ಲ. ಸರ್ಕಾರದ ಹಲವು ಲೋಪಗಳಿವೆ ಆದರೂ ಬೆಂಬಲ ಕೊಡುತ್ತಿದ್ದೇನೆ. ನನ್ನ ಕುಟುಂಬದ ಮದುವೆ ಮಾಡಲು ಹೋದಾಗ ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಿದ್ದರು.
ರಾಮನಗರ ಗ್ರೀನ್ ಜೋನ್ ನಲ್ಲಿದೆ. ಕುಮಾರಸ್ವಾಮಿ ಬೆಂಗಳೂರಿನಿಂದ ಜನರನ್ನ ಕರೆತಂದು ರೆಡ್ ಜೋನ್ ಗೆ ತರುತ್ತಿದ್ದಾರೆಂದಿದ್ದರು ಆದರೆ ಈಗ ಆ ಪುಣ್ಯಾತ್ಮರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.