ಬೆಳಗಾವಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಹುಜನ ಕ್ರಾಂತಿ ಮೋರ್ಚಾ ಸಂಘಟನೆ ಕರೆ ನೀಡಿದ ಭಾರತ್ ಬಂದ್ ಗೆ ಬೆಂಬಲಿಸಿ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಂಜುಮನ್ ಕಾಲೇಜು ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಡಿಸಿ ಕಚೇರಿವರೆಗೆ ತಲುಪಿತು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಸಿಎಂ ಯಡಿಯೂರಪ್ಪ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರಾಣ ಬಿಟ್ಟೇವು, ದೇಶ ಬಿಡೇವು..!
ದೇಶದ ಮೂಲ ನಿವಾಸಿಗಳಾದ ನಾವು ಯಾವುದೇ ಕಾರಣಕ್ಕೂ ಎನ್ಆರ್ ಸಿ ಗೆ ದಾಖಲೆ ನೀಡುವುದಿಲ್ಲ. ದೇಶಕ್ಕಾಗಿ ಪ್ರಾಣ ಬಿಡುತ್ತೇವೆ, ಆದ್ರೆ ದೇಶ ಬಿಡುವ ಮಾತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಹಿಂದೂ ಮುಸ್ಲೀಂ ಸಹೋದರತ್ವ ಭಾವನೆಯಿಂದ ಬದುಕು ಸಾಗಿಸುತ್ತಿದ್ದಾರೆ. ಪ್ರಧಾನಿ ಮೋದಿ,ಅಮಿತ್ ಶಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇಶದ ಜನತೆಯನ್ನು ಧರ್ಮದ ಆಧಾರದ ಮೇಲೆ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಸಂವಿಧಾಣ ವಿರೋಧಿಯಾಗಿರುವ ಪೌರತ್ದ ಕಾಯ್ದೆ ಹಿಂಪಡೆಯುವರೆಗೂ ನಿರಂತರ ಹೋರಾಟ ನಡೆಸಿವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಮಾತ್ ಇಸ್ಲಾಂ ಹಿಂದ್ ಸಂಘಟನೆ , ವಕೀಲರು ಸಂಘಟನೆ ಸೇರಿದಂತೆ ಮುಂತಾದ ಸಂಘಟನೆಗಳು ಬಂದ್ ಗೆ ಬೆಂಬಲಿಸಿ ಎನ್ಆರ್ ಸಿ ವಿರೋಧಿಸಿ ಹೋರಾಟ ನಡೆಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ವೇದಿಕೆ ಸಂಚಾಲಕರಾದ ಮಾಹಾಲಿಂಗಪ್ಪ ಆಲಬಾಳ್, ಹೋರಾಟಗಾರ್ತಿ ನೇಮಿಚಂದ್ರಾ, ರಾಮಕೃಷ್ಣ ಪಾನಬುಡೆ, ಯುವರಾಜ ತಳವಾರ, ಪ್ರಶಾಂತ ಪೂಜಾರಿ, ಪ್ರಕಾಶ ಬೊಮ್ಮನವರ್, ಚಿದಾನಂದ ಬೆಟಸೂರು, ಬಸವರಾಜ ಹುಲ್ಯಾನೂರು, ರಾಜು ಖಾನಾಪೂರ, ಪ್ರವೀಣ, ಜಮಾತ್ ಇಸ್ಲಾಂ ಹಿಂದ್ ಸಂಘಟನೆಯ ಶಾಹೀದ್ ಮೆಮನ್, ಜುನೇದ್ ಇನಾಮದಾರ್, ಮಲ್ಲೇಶ ಕಲಾದಗಿ, ಇಲಿಯಾಸ್ ಅಥಣಿ, ಜ್ಯೋತಿ ಕಡ್ಲಸ್ಕರ್ ಸೇರಿದಂತೆ ಮುಂತಾದವರು ಇದ್ದರು.