ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಚಾಲಕ- ನಿರ್ವಾಹಕರಿಗೆ ಕಿರುಕುಳ ಹೆಚ್ಚಾಗಿದೆ ಎನ್ನುವುದಕ್ಕೆ ಘಟನೆಯೊಂದು ಬೆಳಕಿಗೆ ಬಂದಿದೆ.
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಡ್ರೈವರ್ ಕಮ್ ಕಂಡೆಕ್ಟರ್ ಆಗಿರುವ ಪುಂಡಲಿಕ ಹನುಮಂತ ಉಮರಾಣಿ ಸ್ವ-ಇಚ್ಛೆಯಿಂದ ರಾಜೀನಾಮೆಗೆ ಮುಂದಾಗಿದ್ದಾರೆ. ಡಿಪೋ 32ರಲ್ಲಿ ಬಿಎಂಟಿಸಿಯ ಚಾಲಕ ಹಾಗೂ ನಿರ್ವಾಹಕರಾಗಿರುವ ಪುಂಡಲಿಕ ಹನುಮಂತ ಉಮರಾಣಿ, ಇದೇ ತಿಂಗಳ 15ರಂದು ಬನಶಂಕರಿ- ಅತ್ತಿಬೆಲೆ ಮಾರ್ಗದಲ್ಲಿ ಕಂಡೆಕ್ಟರ್ ಆಗಿ ಕರ್ತವ್ಯದಲ್ಲಿ ಇದ್ದರು.
ಕರ್ತವ್ಯದಲ್ಲಿ ಇದ್ದಾಗ, ಟಿಕೆಟ್ ತನಿಖಾಧಿಕಾರಿ ಗಂಗಮ್ಮ ತಲವಾರ್ ಎಂಬುವವರು ಕೇಸ್ ಹಾಕಿದ್ದರು ಎನ್ನಲಾಗಿದೆ. ನನ್ನ ಮೇಲೆ ಕೇಸ್ ಹಾಕಿದ್ದಕ್ಕೆ ಡಿಪೋದಲ್ಲಿ ಅಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಾನು ಕರ್ತವ್ಯದಲ್ಲಿ ಇದ್ದಾಗ ಕಳ್ಳನ ಹಾಗೇ ನೋಡಿ ಅವಮಾನ ಮಾಡಿದ್ದಾರೆ. ಈ ಅವಮಾನಕ್ಕೆ ಆತ್ಮಹತ್ಯೆ ಮಾಡಿಕೊಳ್ಳೋದಾ ಎಂದು ಒಮ್ಮೊಮ್ಮೆ ಎನಿಸುತ್ತೆ ಎಂದು ನಿರ್ವಾಹಕ ಭಾವುಕರಾಗಿ ಮಾತನಾಡಿದರು.
ಇಂದು ಫ್ರೀಡಂಪಾರ್ಕ್ ರಸ್ತೆಯಲ್ಲಿ ಸಾರಿಗೆ ನೌಕರರ ಪ್ರತಿಭಟನೆಗೆ ಬಂದಿದ್ದ ನಿರ್ವಾಹಕ ಪುಂಡಲೀಕ ಹನುಮಂತ ನೇರವಾಗಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ.
Laxmi News 24×7