ಬಳ್ಳಾರಿ: ದೇಶಾದ್ಯಂತ ಸಂಪೂರ್ಣ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಎಲ್ಲಿಯೂ ಮದ್ಯ ಸಿಗುತ್ತಿಲ್ಲ. ಹೀಗಾಗಿ ಕೆಲ ಕುಡುಕರು ಅಬಕಾರಿ ಇಲಾಖೆ ಕಚೇರಿಯಲ್ಲಿ ಇಟ್ಟಿದ್ದ ಮದ್ಯವನ್ನು ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸಿರಗುಪ್ಪ ನಗರದಲ್ಲಿ ನಡೆದಿದೆ.
ಸಿರುಗುಪ್ಪ ನಗರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದು ಕಚೇರಿಯಲ್ಲಿ ಇಟ್ಟಿದ್ದರು. ಇತ್ತ ಕಳೆದೊಂದು ವಾರದಿಂದ ರಾಜ್ಯದಲ್ಲಿ ಎಲ್ಲಿಯೂ ಮದ್ಯದ ಸಿಗುತ್ತಿಲ್ಲ. ಹೀಗಾಗಿ ಕಳ್ಳರು ಅಬಕಾರಿ ಕಚೇರಿಯಲ್ಲಿದ್ದ ಮದ್ಯದ ಬಾಕ್ಸ್ ಗಳನ್ನು ಕದಿಯಲು ಪ್ಲಾನ್ ಮಾಡಿದ್ದರು. ಅದರಂತೆ ಕಚೇರಿಯ ಹಿಂಬದಿಯಿಂದ ಹತ್ತಿದ ಕಳ್ಳರು ಹೆಂಚುಗಳನ್ನು ತೆಗೆದು ಒಳಗೆ ನುಸುಳಿ ಸುಮಾರು 25 ಸಾವಿರ ರೂ. ಮೌಲ್ಯದ 7 ಬಾಕ್ಸ್ ಗಳನ್ನು ಕಳ್ಳತನ ಮಾಡಿದ್ದಾರೆ.
ಈ ಸಂಬಂಧ ಮಾಹಿತಿ ಸಿಗುತ್ತಿದ್ದ ಸ್ಥಳಕ್ಕೆ ಜಿಲ್ಲೆಯ ಅಬಕಾರಿ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯ ಕಳ್ಳತದ ಕುರಿತು ಸಿರಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಕ್ಡೌನ್ನಿಂದ ಎಣ್ಣೆ ಸಿಗದೇ ಸಾವನ್ನಪ್ಪುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಮಂಗಳವಾರ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು, ವಾರದಲ್ಲಿ ಮದ್ಯಕ್ಕಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 13ಕ್ಕೆ ಏರಿದೆ. ಕೊರೊನಾಗೂ ಇಷ್ಟು ಜನ ಸಾವನ್ನಪ್ಪಿಲ್ಲ.