ಬೆಂಗಳೂರು: ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್ 14ರವರೆಗೆ ದೇಶವನ್ನು ಲಾಕ್ಡೌನ್ ಮಾಡಲಾಗಿದೆ. ಮದ್ದಿಲ್ಲದ ಕೊರೋನಾ ಕಾಯಿಲೆಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾರಕ ಸೋಂಕನ್ನು ತಡೆಗಟ್ಟಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ, ಇಡೀ ದೇಶವನ್ನು ಲಾಕ್ಡೌನ್ ಮಾಡಿದ್ದರು ಜನರು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದಾರೆ. ಇಂತಹವರಿಗೆ ಪೊಲೀಸರು ಕಂಡಕಂಡಲ್ಲಿ ಲಾಠಿ ರುಚಿ ತೋರಿಸುತ್ತಿದ್ದಾರೆ.
ಕೆಲವರು ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಅಡ್ಡಾಡುತ್ತಾರೆ. ಆದರೆ, ಕೆಲವಷ್ಟು ಮಂದಿ ತುರ್ತು ಕೆಲಸ ಮೇಲೆ ಹೊರಗೆ ಓಡಾಡುತ್ತಿದ್ದಾರೆ. ಕೆಲವರಿಗೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗುವವರು, ಬೆಳಗ್ಗೆ ಪತ್ರಿಕೆ, ಹಾಲು ಹಾಕುವ ಹುಡುಗರು, ಇನ್ನಿತರ ಅಗತ್ಯ ಕೆಲಸದ ಮೇಲೆ ಹೊರಗೆ ಹೋಗುವವರ ಮೇಲೂ ಪೊಲೀಸರು ಮನಸೋಇಚ್ಛೆ ಬಂದಂತೆ ಥಳಿಸಿರುವ ನೂರಾರು ಪ್ರಕರಣಗಳು ಕಳೆದ ಮೂರು ದಿನಗಳಲ್ಲಿ ವರದಿಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದ್ದು, ಜನರಿಗೆ ಅನಗತ್ಯವಾಗಿ ಪೊಲೀಸರು ಹೊಡೆಯದಂತೆ ಸೂಚನೆ ನೀಡಲಾಗಿದೆ.
ಈ ವಿಚಾರವಾಗಿ ಇಂದು ಬೆಂಗಳೂರಿನ ಎಲ್ಲ ಪೊಲೀಸರಿಗೂ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಕಟ್ಟುನಿಟ್ಟಿನ ಕೆಲ ಸೂಚನೆಗಳನ್ನು ನೀಡಿದ್ದಾರೆ. ಇಂದಿನಿಂದ ಕಾನೂನು ಸುವ್ಯವಸ್ಥೆ ಮತ್ತು ಸಂಚಾರಿ ಪೊಲೀಸರು ಲಾಠಿ ಇಲ್ಲದೆ ಫೀಲ್ಡ್ನಲ್ಲಿ ಕೆಲಸ ಮಾಡಬೇಕು, ಪೂರ್ಣ ಯೂನಿಫಾರಂ ಧರಿಸಿ, ಲಾಠಿಯನ್ನು ಆಯಾ ಪೊಲೀಸ್ ಠಾಣೆಯಲ್ಲಿಯೇ ಇಟ್ಟು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಸುಖಾಸುಮ್ಮನೆ ಎಲ್ಲರ ಮೇಲೂ ಅನಗತ್ಯವಾಗಿ ಲಾಠಿ ಬೀಸದಂತೆ ಈ ಕ್ರಮ ಎಂದು ಹೇಳಿದ್ದಾರೆ.