ಲಾಕ್ ಡೌನ್: ವಲಸೆ ಕಾರ್ಮಿಕರನ್ನು ಖುದ್ದಾಗಿ ಭೇಟಿ ಮಾಡಿ ಅಹವಾಲು ಆಲಿಸಿದ ರೈಲ್ವೆ ಸಚಿವ ಸುರೇಶ್ ಅಂಗಡಿ
ಬೆಳಗಾವಿ, ಏ.೨೩(ಕರ್ನಾಟಕ ವಾರ್ತೆ): ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿನಿಲಯದಲ್ಲಿ ಆಶ್ರಯ ಪಡೆದಿರುವ ರಾಜಸ್ತಾನ ಮತ್ತಿತರ ರಾಜ್ಯಗಳ ವಲಸೆ ಕಾರ್ಮಿಕರನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಭೇಟಿ ಮಾಡಿದರು.
ವಿವಿಧ ರಾಜ್ಯಗಳ ವಲಸೆ ಕಾರ್ಮಿಕರನ್ನು ಇರಿಸಲಾಗಿರುವ ಆಶ್ರಯ ಕೇಂದ್ರಕ್ಕೆ ಗುರುವಾರ (ಏ.೨೩) ಭೇಟಿ ನೀಡಿದ ಸಚಿವರು, ಕಾರ್ಮಿಕರಿಗೆ ನೀಡಲಾಗುತ್ತಿರುವ ಊಟ ಮತ್ತಿತರ ಮೂಲಸೌಕರ್ಯಗಳ ಬಗ್ಗೆ ಕಾರ್ಮಿಕರಿಂದಲೇ ಮಾಹಿತಿಯನ್ನು ಪಡೆದುಕೊಂಡರು.
ಇದೇ ವೇಳೆ ಅವರ ಅಹವಾಲುಗಳನ್ನು ಕೂಡ ಆಲಿಸಿದ ಸಚಿವರು, ಕೋವಿಡ್-೧೯ ಹರಡುವಿಕೆಯನ್ನು ತಡೆಗಟ್ಟುವ ಉದ್ಧೇಶದಿಂದ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ವಲಸೆ ಕಾರ್ಮಿಕರ ಸಂಚಾರವನ್ನು ನಿರ್ಬಂಧಿಸಿ ಅಯಾ ರಾಜ್ಯ ಹಾಗೂ ಜಿಲ್ಲೆಗಳಲ್ಲಿಯೇ ಅವರಿಗೆ ಊಟ, ವಸತಿ ಸೌಲಭ್ಯ ಒದಗಿಸಲಾಗಿದ್ದು, ಲಾಕ್ ಡೌನ್ ಮುಗಿಯುವವರೆಗೆ ಅಧಿಕಾರಿಗಳ ಜತೆ ಸಹಕರಿಸಬೇಕು ಎಂದು ತಿಳಿಸಿದರು.
ಅದೇ ರೀತಿ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರು ಅನಿವಾರ್ಯವಾಗಿ ಆಶ್ರಯ ಪಡೆದುಕೊಂಡಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಆರೋಗ್ಯದ ಬಗ್ಗೆಯೂ ನಿಗಾ ವಹಿಸಬೇಕು ಎಂದು ಸಚಿವ ಸುರೇಶ್ ಅಂಗಡಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ವತಃ ಸಚಿವರೇ ತಮ್ಮ ಬಳಿ ಬಂದು ಅಹವಾಲುಗಳನ್ನು ಆಲಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಕಾರ್ಮಿಕರು, ಜಿಲ್ಲಾಡಳಿತದಿಂದ ತಮಗೆ ಉತ್ತಮ ಊಟೋಪಹಾರ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.
ಶಾಸಕ ಅನಿಲ್ ಬೆನಕೆ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಮತ್ತಿತರರು ಉಪಸ್ಥಿತರಿದ್ದರು.
***