ಬೆಳಗಾವಿ: ಪ್ರೀತಿ ನಿರಾಕರಿಸಿದ ಯುವತಿಗೆ ಕೊಲೆ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ತಿಪ್ಪಣ್ಣ ಡೋಕರೆ ಎಂಬಾತನು ತನ್ನು ಪ್ರೀತಿಯನ್ನು ನಿರಾಕರಿಸಿದ ಯುವತಿ ಮನೆ ಮೇಲೆ ಕಲ್ಲು ತೂರಾಟ ಮಾಡಿ ಕಿಟಕಿ ಗಾಜು ಪುಡಿ ಮಾಡಿದ್ದಾನೆ.
ಭಯಭೀತರಾದ ಯುವತಿ ಮನೆಯವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಇದೇ ಗ್ರಾಮದ ಬಿಕಾಂ ವಿದ್ಯಾರ್ಥಿನಿಯ ಬೆನ್ನು ಬಿದ್ದಿದ್ದ ಈತ ಮೂರು ವರ್ಷಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರತಿದಿನ ಕಾಲೇಜಿಗೆ ಹೋಗುವಾಗ ಕಾಡಿಸುತ್ತಿದ್ದ. ಹೀಗಾಗಿ ಬೇಸತ್ತ ಆಕೆ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿದ್ದಳು.
ತಾಯಿಯೊಂದಿಗೆ ವಾಸವಿರುವ ಯುವತಿಯ ಮನೆಗೆ ಹೋಗುತ್ತಿದ್ದತಿಪ್ಪಣ್ಣ ಮದುವೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದ. ಇಲ್ಲದಿದ್ದರೆ ನಿಮ್ಮ ಮಗಳನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಕೆಲವು ತಿಂಗಳ
ಹಿಂದೆ ಯುವತಿಯ ಮನೆಯ ಹಿಂಬಾಗಿಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದ. ಈಗ ಮತ್ತೆ ಮನೆಗೆ ಬಂದು ಗಲಾಟೆ ಮಾಡಿ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜು ಒಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿಂದೆಯೂ ತಿಪ್ಪಣ್ಣನ ಕಿರಿಕಿರಿಗೆ ಬೇಸತ್ತು ಯುವತಿ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದರು. ಆಗ ಪೊಲೀಸರು ಎಚ್ಚರಿಕೆ ಕೊಟ್ಟು ಬುದ್ಧಿ ಮಾತು ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.
ಕಿಣಯೇ ಗ್ರಾಮದಲ್ಲಿ ಯುವತಿಗೆ ತೊಂದರೆ ಕೊಡುತ್ತಿದ್ದ ತಿಪ್ಪಣ್ಣ ಡೋಕರೆ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ರಜೆ ಇರುವುದರಿಂದ ಯುವತಿ ಕಾಲೇಜಿಗೆ ಹೋಗಿಲ್ಲ.
-ಯಡಾ ಮಾರ್ಟಿನ್ ಮಾರ್ಬನ್ಯಾಂಗ್,
ಪೊಲೀಸ್ ಕಮಿಷನರ್