ಹುಕ್ಕೇರಿ: ಉತ್ತರ ಕರ್ನಾಟಕದ ಅತ್ಯಂತ ಗಟ್ಟಿ ಧ್ವನಿ ಎಂದೇ ಹೆಸರಾಗಿದ್ದ ಉಮೇಶ ಕತ್ತಿ ಅವರ ಅಕಾಲಿಕ ಅಗಲಿಕೆಯಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಖಾಲಿಖಾಲಿ ಎನಿಸುತ್ತಿದೆ. ಕತ್ತಿ ಕುಟುಂಬಕ್ಕೆ ನಿಷ್ಠರಾದ ಮತದಾರರನ್ನು ಸೆಳೆದು ಹೊಸ ಮುಖ ಗೆಲ್ಲುವುದೋ ಅಥವಾ ವಂಶವಾಹಿ ಪರಂಪರೆ ಮುಂದುವರಿಯುವುದೋ ಎಂಬುದೇ ಈಗಿರುವ ಕುತೂಹಲ.
‘ಉಮೇಶ ಕತ್ತಿ ಅಗಲಿಕೆಯಿಂದ ಅನುಕಂಪದ ಮತಗಳನ್ನು ಪಡೆದು ಗೆಲ್ಲುವ ಅವಶ್ಯಕತೆ ಇಲ್ಲ. ಕತ್ತಿ ಕುಟುಂಬಕ್ಕೇ ಸಾಂಪ್ರದಾಯಿಕ ಮತಗಳಿವೆ. ಕುಟುಂಬದಲ್ಲಿ ಯಾರು ನಿಂತರೂ ಜನ ಬೆಂಬಲಿಸುತ್ತಾರೆ’ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
ಕುಟುಂಬದಲ್ಲೇ ಸ್ಪರ್ಧೆ:
ನಿರೀಕ್ಷೆಯಂತೆ, ಉಮೇಶ ಕತ್ತಿ ಅವರ ಹಿರಿಯ ಪುತ್ರ ನಿಖಿಲ್ ಅಖಾಡಕ್ಕೆ ಇಳಿದಿದ್ದಾರೆ. ತಂದೆಯ ವಾರಸುದಾರಿಕೆ ಮುಂದುವರಿ ಸುವ ಉಮೇದಿನಲ್ಲಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಉಮೇಶ ಅವರ ಪತ್ನಿ ಸುಶೀಲಾ ಕೂಡ ಪುತ್ರನಿಗೇ ಟಿಕೆಟ್ ಕೊಡಬೇಕು ಎಂದು ಹಟ ಹಿಡಿದಿದ್ದಾರೆ.
ಇಂಗ್ಲೆಂಡ್ನಲ್ಲಿ ಎಂಬಿಎ ಪದವಿ ಮುಗಿಸಿರುವ ನಿಖಿಲ್ ತಂದೆಯ ಗರಡಿಯಲ್ಲೇ ಪಳಗಿದ್ದಾರೆ. ಒಂದು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಸದ್ಯ ಹಿರಾ ಶುಗರ್ ಕಾರ್ಖಾನೆಯ ಚೇರ್ಮನ್ ಆಗಿದ್ದು, ಅವರಿಗೆ ಅನುಕೂಲವಾಗಲಿದೆ ಎನ್ನುವುದು ಲೆಕ್ಕಾಚಾರ.
ಅಣ್ಣನಿಂದ ತೆರವಾದ ಕ್ಷೇತ್ರದಲ್ಲಿ ತಮಗೇ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ರಮೇಶ ಕತ್ತಿ ಅವರದು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಒಂದು ಬಾರಿ ಸಂಸದರಾಗಿ ರಾಜಕೀಯದಲ್ಲೂ ಅವರು ಅಣ್ಣನಂತೆಯೇ ಛಾಪು ಮೂಡಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಫಜೀತಿ ಬಂದಿರುವುದು ಮತದಾರರಿಗೆ.
ಈ ಸಹೋದರರಿಗೆ ನಿಷ್ಠರಾದ ದೊಡ್ಡ ಪಡೆಯೇ ಹುಕ್ಕೇರಿ ಕ್ಷೇತ್ರದಲ್ಲಿದೆ. ನಿಖಿಲ್ ಬೆಂಬಲಿಸಲು ಎಷ್ಟು ಜನರಿದ್ದಾರೋ, ರಮೇಶ ಅವರ ಬೆಂಬಲಕ್ಕೂ ಅಷ್ಟೇ ಜನರಿದ್ದಾರೆ. ಅವರವರ ಬೆಂಬಲಿ ಗರಲ್ಲಿ ಮಾತ್ರ ತಮ್ಮ ನಾಯಕನಿಗೇ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಮೂಡಿದೆ.
ಮಾಜಿ ಸಚಿವ ಶಶಿಕಾಂತ ನಾಯಿಕ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಕೂಡ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರಿಗೂ ಆರ್ಎಸ್ಎಸ್ ಕೃಪಾ ಶೀರ್ವಾದ ಇರುವ ಕಾರಣ ಹಗುರವಾಗಿ ಪರಿಗಣಿಸುವಂತಿಲ್ಲ ಎನ್ನುವುದು ಕ್ಷೇತ್ರದ ಜನರ ಅನಿಸಿಕೆ.