ಬೆಳಗಾವಿ ನಗರದ ಹೊರ ಭಾಗದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಎಂಇಎಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಸೋಮವಾರ ಬೆಳಗಾವಿಯ ಶಾಹಪುರದ ಸಾಂಸ್ಕøತಿಕ ಭವನದಲ್ಲಿ ಎಂಇಎಸ್ ಮುಖಂಡರು ಸಭೆ ಕರೆದಿದ್ದರು. ಬೆಳಗಾವಿ ಗ್ರಾಮೀಣ ಭಾಗದ ಸುಮಾರು 31 ಗ್ರಾಮಗಳ ಜಮೀನು ಈ ರಿಂಗ್ ರೋಡ್ನಲ್ಲಿ ಹೋಗುತ್ತದೆ. ಈ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು. ಬಳಿಕ ಮಾತನಾಡಿದ ಮಾಜಿ ಶಾಸಕ ಮನೋಹರ್ ಕಿಣೇಕರ್ ಈಗಾಗಲೇ ಸರ್ಕಾರ ಅನೇಕ ರೈತರ ಜಮೀನನ್ನು ಸ್ವಾದೀನಪಡಿಸಿಕೊಂಡಿದೆ.
ಈಗ ಮತ್ತೆ ರಿಂಗ್ ರೋಡ್ ನಿರ್ಮಾಣಕ್ಕಾಗಿ ರೈತರ ಫಲವತ್ತಾದ ಭೂಮಿಯನ್ನು ಸ್ವಾದೀನಪಡಿಸಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ನಾವು ಬೀದಿಗಿಳಿದು ಹೋರಾಟ ಮಾಡಬೇಕಿದೆ. ಅಲ್ಲದೇ ಕಾನೂನು ಹೋರಾಟವನ್ನು ಮಾಡುವ ಅವಶ್ಯಕತೆಯಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದರು.