ಶಿವಮೊಗ್ಗ – ಈಚೆಗಷ್ಟೆ ಕೋಮುಗಲಭೆಯಿಂದ ತತ್ತರಿಸಿರುವ ಶಿವಮೊಗ್ಗ ನಗರ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದಿದೆ.
ದೇವಸ್ಥಾನವೊಂದರ ಕಟ್ಟೆಯ ಮೇಲೆ ಸಿಕ್ಕಿರುವ ಅನಾಮದೇಯ ಪತ್ರವೊಂದು ಜನರನ್ನು ಮಲಗದಂತೆ ಮಾಡಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮುವರನ್ನು ಕೊಲೆಗೈಯಲು ಸಂಚು ರೂಪಿಸಲಾಗಿದೆ ಎನ್ನುವ ಆಘಾತಕಾರಿ ಅಂಶವನ್ನು ಹೊತ್ತ ಪತ್ರವೊದು ಪೊಲೀಸರ ಕೈ ಸೇರಿದ್ದು, ಎಫ್ಐಆರ್ ದಾಖಲಾಗಿದೆ.
ಗಾಂಧಿ ಬಜಾರದ ಗಂಗಾ ಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿ ಮಾಲೀಕರೊಬ್ಬರು ಅಂಗಡಿ ಬಂದ್ ಮಾಡುವ ವೇಳೆ ಕವರ್ ಪತ್ತೆಯಾಗಿದೆ. ಈ ಲಕೋಟೆಯ ಮೇಲೆ ಪೊಲೀಸ್ ಇಲಾಖೆಗೆ ಈ ಪತ್ರಕೊಟ್ಟು ಕೋಮುಗಲಭೆ ತಪ್ಪಿಸಿ ಮತ್ತು ಮೂವರ ಪ್ರಾಣವನ್ನ ಉಳಿಸಿ ಎಂದು ಬರೆಯಲಾಗಿದೆ.
ಓರ್ವ ಮಾರ್ವಾಡಿಯನ್ನು ಅರ್ಧಂಬರ್ಧ ಕೊಲೆ ಮಾಡಲಾಗಿದೆ. ಆತನನ್ನ ಸಂಪೂರ್ಣ ತೆಗೆಯಬೇಕು. ಇನ್ನೊಬ್ಬ ಮಾರ್ವಾಡಿ ಉದ್ದಿಮೆದಾರ ಹಾಗೂ ಹರ್ಷನ ಸಹಚರ ಸಹ ಕೊಲೆ ಮಾಡಬೇಕೆಂದು ಪ್ಲ್ಯಾನ್ ಮಾಡಲಾಗಿದೆ ಎಂದು ಪತ್ರದಲ್ಲಿ ಉಲ್ಲೆಖಿಸಲಾಗಿದೆ.
ಮಾರುಕಟ್ಟೆಯ ಮಾರ್ವಾಡಿ ಅಂಗಡಿಯ ಪಕ್ಕದಲ್ಲಿ ಶೌಚಾಲಯವಿದ್ದು, ಈ ಶೌಚಾಲಯದ ಬಳಿ ಮೂವರು ಗಾಂಜಾ ಸೇದುವಾಗ ಈ ಬಗ್ಗೆ ಮಾತನಾಡಿಕೊಂಡಿರುವುದನ್ನು ಕೇಳಿಸಿಕೊಂಡಿದ್ದೇನೆ. ಇದರಿಂದ ನನಗೆ ಭಯವಾಗಿ ನಾನು ಈ ಪತ್ರವನ್ನು ಬರೆದಿದ್ದೇನೆ ಎಂದು ಉಲ್ಲೇಖಿಸಲಾಗಿದೆ.
ಮೂವರನ್ನು ಮಂಗಳೂರಿನಿಂದ ಕರೆಸಬೇಕು, ಅವರು ಮೊಬೈಲ್ ಫೋನ್ ಬಳಸಬಾರದು, ಯಾವುದೇ ಕಾರಣಕ್ಕೂ ಸ್ಥಳೀಯವಾಗಿ ಯಾರಿಗೂ ಈ ಬಗ್ಗೆ ತಿಳಿಯಬಾರದು. ಮತ್ತು ಗಲಾಟೆ ನಡೆದರೆ ಮಾತ್ರ ಈ ಹಬ್ಬ ಆಚರಣೆ ತಡೆಯೋಕಾಗೋದು ಎಂದು ಮೂವರು ಯುವಕರು ಮಾತನಾಡಿಕೊಂಡಿರುವುದನ್ನ ಕೇಳಿಸಿಕೊಂಡು ಭಯಭೀತನಾಗಿರುವುದಾಗಿ ಉಲ್ಲೇಖಿಸಲಾಗಿದೆ.
ಮೊಹ್ಮದ್ ಫೈಸಲ್ ಯಾನೆ ಚೆನ್ನು ಎಂಬಾತ ಗಾಂಜಾ ಮಾರುವುದು, ಗಾಂಜಾ ಸೇವನೆಯನ್ನೂ ಮಾಡುತ್ತಾನೆ. ಈತ ಆಜಾದ್ ನಗರದಲ್ಲಿ ರೌಡಿತರ ವರ್ತಿಸುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಫೈಸಲ್ ನನ್ನು ಪೊಲೀಸರು ವಿಚಾರ ಮಾಡಬೇಕು ಮತ್ತು ಪತ್ರ ಬರೆದ ಅಪರಿಚತನನ್ನ ಪತ್ತೆಹಚ್ಚಬೇಕು ನಂತರ ಕಾನೂನು ಕ್ರಮ ಕೈಗೊಳ್ಳುವಂತೆ ಅಂಗಡಿ ಮಾಲೀಕ ಪ್ರಶಾಂತ್ ಎಫ್ ಐಆರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.