ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ನಗರಿ ಖ್ಯಾತಿ ಗಳಿಸಿರುವ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವಳಿ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ, ಚಾಕು ಇರಿತ ಹಾಗೂ ಸಣ್ಣ-ಪುಟ್ಟ ವಿಷಯಕ್ಕೆ ಗಲಾಟೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಅಪರಾಧ ಪ್ರಕರಣಗಳು ದಿನದಿಂದ ಹೆಚ್ಚುತ್ತಲೇ ಇವೆ. ಇದು ಇಲ್ಲಿನ ಜನರ ನಿದ್ದೆಗೆಡಿಸಿದೆ.
ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಪೊಲೀಸರು ಎಷ್ಟೋ ನಿಯಮಗಳನ್ನು ಜಾರಿಗೊಳಿಸಿದರೂ, ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ. ಕೊಲೆ, ದರೋಡೆ, ಚಾಕು ಇರಿತ, ಮೀಟರ್ ಬಡ್ಡಿ ಕುಳಗಳ ಅಟ್ಟಹಾಸ ಮಿತಿಮೀರಿದೆ. ಅದರಲ್ಲೂ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 38 ಕೊಲೆ ಪ್ರಕರಣಗಳು ನಡೆದಿವೆ ಅನ್ನೋದು ಗಂಭೀರ ವಿಚಾರ.
ಪೊಲೀಸರ ವೈಫಲ್ಯ?: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಳೇ ಹುಬ್ಬಳ್ಳಿ ಕೋಮು ಗಲಭೆ ನಂತರ ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ನೆತ್ತರು ಹರಿಯುತ್ತಲೇ ಇದೆ. ಇದಕ್ಕೆ ಉದಾಹರಣೆ ಗುರೂಜಿ ಚಂದ್ರಶೇಖರ ಹತ್ಯೆ ಹಾಗೂ ಹೆಣ್ಣು, ಹೊನ್ನು, ಮಣ್ಣು ವಿಚಾರವಾಗಿ ಒಂದಷ್ಟು ಕೊಲೆಗಳು ನಡೆದಿದ್ದರೆ, ಮತ್ತಷ್ಟು ಕೊಲೆಗಳು ಮೀಟರ್ ಬಡ್ಡಿ, ಹಳೇ ವೈಷಮ್ಯ, ಗುಟ್ಕಾ, ಸಿಗರೇಟ್, ಎಗ್ರೈಸ್ನಂತಹ ಕುಲ್ಲಕ ಕಾರಣಕ್ಕೂ ಕೊಲೆ ನಡೆದಿರುವುದು ವಿಪರ್ಯಾಸ. ಇದಕ್ಕೆಲ್ಲ ಗೃಹ ಇಲಾಖೆ ಹಾಗೂ ಪೊಲೀಸರ ವೈಫಲ್ಯವೇ ಕಾರಣ ಎಂಬ ಆರೋಪಗಳಿವೆ.