ಚಿಕ್ಕೋಡಿ(ಬೆಳಗಾವಿ): ರಾಜ್ಯದಲ್ಲಿ ಮದ್ಯ ಸಂಪೂರ್ಣ ನಿಷೇಧ ಮಾಡಬೇಕು. ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಲು ಮೊದಲು ನಾನೇ ಬೆಂಬಲ ಸೂಚಿಸುತ್ತೇನೆ ಎಂದು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಪಾಸಿಟಿವ್ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ರೋಗ ಬಂದು ಜನರಿಗೆ ಒಳ್ಳೆಯ ದಾರಿ ತೋರಿಸಿದೆ. ಕೆಟ್ಟ ಚಟಗಳನ್ನ ಕಡಿಮೆ ಮಾಡಲು ಅವಕಾಶ ಸಿಕ್ಕಿದೆ. ಮದ್ಯದಿಂದ ಬಡವರೇ ಹಾಳಾಗೋದು, ಶ್ರೀಮಂತರಲ್ಲ. ಲಾಕ್ಡೌನ್ನಿಂದ ಮದ್ಯ ಸಿಗದ ಕಾರಣ ಗ್ರಾಮೀಣ ಭಾಗದ ಮಹಿಳೆಯರು ಸಂತಸದಿಂದ ಇದ್ದಾರೆ. ಹೀಗಾಗಿ ಮದ್ಯ ಬಂದ್ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದರು.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತ ವ್ಯಕ್ತಿ ಡಾನ್ಸ್ ವಿಚಾರವಾಗಿ ಮಾತನಾಡಿದ ಅವರು, ಆತನ ವರದಿ ನೆಗೆಟಿವ್ ಬಂದಿದ್ದಕ್ಕೆ ಆತ ಡಾನ್ಸ್ ಮಾಡಿದ್ದಾನೆ ಎಂದರು.
ಬೆಳಗಾವಿ ಜಿಲ್ಲೆಯ ಉಸ್ತುವಾರಿ ನೋಡಲು ಜಗದೀಶ್ ಶೆಟ್ಟರ್ ಎಲ್ಲ ಕಡೆ ಬರಬೇಕು ಅಂತೇನೂ ಇಲ್ಲ. ಜಾಗತಿಕ ವ್ಯಾಧಿ ಹಿನ್ನೆಲೆಯಲ್ಲಿ ಎಲ್ಲರೂ ಜವಾಬ್ದಾರಿ ಹೊತ್ತು ಕೆಲಸ ಮಾಡಲಿದ್ದೇವೆ ಎಂದ ಸಚಿವ ಜಾರಕಿಹೊಳಿ ಹೇಳಿದರು.