ಕರ್ನಾಟಕ ರಾಜ್ಯ 14 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಬೆಳಗಾವಿಯ ಅಜಯ್ ಲಮಾಣಿ ರಾಜ್ಯ ತಂಡಕ್ಕೆ ಆಯ್ಕೆ
• ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ಘೋಷಣೆ
• ರಾಜ್ಯ ತಂಡಕ್ಕೆ ಬೆಳಗಾವಿಯ ಅಜಯ್ ಆಯ್ಕೆ
• ವಿಕೆಟ್ ಕೀಪರ್ ಆಗಿ ಮಿಂಚಲಿರುವ ಅಜಯ್
• ಜ.27 ರಿಂದ ವಿಜಯನಗರದಲ್ಲಿ ಟೂರ್ನಿ ಆರಂಭ
ಬೆಳಗಾವಿಯ ಕ್ರಿಕೆಟ್ ಪ್ರತಿಭೆಗಳಿಗೆ ಮತ್ತೊಂದು ಗರಿ ಲಭಿಸಿದೆ. ಆಂಧ್ರಪ್ರದೇಶದಲ್ಲಿ ನಡೆಯಲಿರುವ ದಕ್ಷಿಣ ವಲಯದ 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಬೆಳಗಾವಿಯ ನೀನಾ ಸ್ಪೋರ್ಟ್ಸ್ ಕ್ಲಬ್ನ ಅಜಯ್ ಲಮಾಣಿ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ದಕ್ಷಿಣ ವಲಯ ಕ್ರಿಕೆಟ್ ಪಂದ್ಯಾವಳಿಗಾಗಿ 15 ಸದಸ್ಯರ ಬಲಿಷ್ಠ ತಂಡವನ್ನು ಘೋಷಿಸಲಾಗಿದೆ. ಜನವರಿ 27 ರಿಂದ ಆಂಧ್ರಪ್ರದೇಶದ ವಿಜಯನಗರದಲ್ಲಿ ಈ ಟೂರ್ನಿ ಆರಂಭವಾಗಲಿದ್ದು, ತಂಡಕ್ಕೆ ಬೆಳಗಾವಿಯ ಅಜಯ್ ಲಮಾಣಿ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಸಮರ್ಥ್ ಸುರೇಶ್ ತಂಡವನ್ನು ಮುನ್ನಡೆಸಲಿದ್ದು, ತಂಡದಲ್ಲಿ ಪವನ್ದೀಪ್ ಭರಡ್ಕಣೆ, ಪ್ರಭಾವ್ ಪಾಯ್ಡಾ ಸೇರಿದಂತೆ ಹಲವು ಉದಯೋನ್ಮುಖ ಆಟಗಾರರು ಸ್ಥಾನ ಪಡೆದಿದ್ದಾರೆ.
ಬೆಳಗಾವಿಯ ಲವ್ಡೇಲ್ ಸೆಂಟರ್ ಸ್ಕೂಲ್ ವಿದ್ಯಾರ್ಥಿಯಾಗಿರುವ ಅಜಯ್ ಲಮಾಣಿ, ನೀನಾ ಸ್ಪೋರ್ಟ್ಸ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತುದಾರ ಮಜೀದ್ ಮಕಾಂದರ್ ಅವರ ಮಾರ್ಗದರ್ಶನದಲ್ಲಿ ಅಜಯ್ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ತಂಡದೊಂದಿಗೆ ತರಬೇತುದಾರರಾಗಿ ಆದಿತ್ಯ ಸಾಗರ್, ವ್ಯವಸ್ಥಾಪಕರಾಗಿ ಮಹಾಲಿಂಗ ಹಾಗೂ ಫಿಸಿಯೋಥೆರಪಿಸ್ಟ್ ಆಗಿ ವಿನಯ್ ಕುಮಾರ್ ಕಾರ್ಯನಿರ್ವಹಿಸಲಿದ್ದು, ಬೆಳಗಾವಿಯ ಪ್ರತಿಭೆಯ ಸಾಧನೆಗೆ ಜಿಲ್ಲೆಯ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Laxmi News 24×7