ಮೈಸೂರು: ನಮ್ಮ ತಂದೆಯೇ 5 ವರ್ಷ ಸಿಎಂ. ಖುದ್ದು ಮುಖ್ಯಮಂತ್ರಿಗಳೇ ಅಧಿವೇಶನದಲ್ಲಿ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ಸಿಎಂ ಖುದ್ದಾಗಿ ಹೇಳಿದ ಮೇಲೆ ಮತ್ತೆ ಆ ಬಗ್ಗೆ ಚರ್ಚೆಯೇ ಇಲ್ಲ ಎಂದು ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ತಂದೆಯ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಎರಡೂವರೆ ವರ್ಷದಿಂದ ಇದನ್ನೇ ಹೇಳುತ್ತಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ನಮ್ಮ ತಂದೆಯ ಮಾತೇ ನನ್ನ ಮಾತು ಕೂಡ. ಸಚಿವ ಸಂಪುಟ ಪುನಾರಚನೆಗಾಗಿ ಶಾಸಕರು ದೆಹಲಿಗೆ ಹೋಗಿದ್ದಾರೆ. ಶಾಸಕರು ದೆಹಲಿಗೆ ಹೋಗಿರುವುದಕ್ಕೂ ಸಿಎಂ ಸ್ಥಾನಕ್ಕೂ ಸಂಬಂಧವೇ ಇಲ್ಲ. ಉಪಚುನಾವಣೆ ಫಲಿತಾಂಶಕ್ಕೂ ಸಿಎಂ ಸ್ಥಾನಕ್ಕೂ ಸಂಬಂಧ ಇಲ್ಲ. ಸರ್ಕಾರವೂ ಭದ್ರವಾಗಿದೆ, ಸಿಎಂ ಸ್ಥಾನವೂ ಭದ್ರವಾಗಿದೆ. ನಾನು ಎಷ್ಟು ಭಾರಿ ಅಂತ ಇದನ್ನು ಸ್ಪಷ್ಟಪಡಿಸಲಿ ಹೇಳಿ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಎರಡೂವರೆ ವರ್ಷ ಆಗಿರುವ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಕೇಳುತ್ತಿದ್ದಾರೆ. ಸಂಪುಟ ಪುನಾರಚನೆ ಮಾಡಬೇಕಿದೆ. ಯಾವಾಗ ಎಂಬುದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮ ತಂದೆ ಸಿಎಂ ಆಗಿರುವವರೆಗೂ ನಾನು ಸಚಿವ ಸ್ಥಾನ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿದ್ದ ಕುಟುಂಬ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮದು ಕುಟುಂಬ ರಾಜಕಾರಣ ಅಲ್ಲ. ನಾನು ಎಂಎಲ್ಸಿ ಆಗಿರುವುದು ಕುಟುಂಬ ರಾಜಕಾರಣ ಆಗುವುದಿಲ್ಲ. ನಮ್ಮ ತಂದೆಯ ರಾಜಕೀಯ ಜೀವನ ಮುಂದುವರಿಕೆ ಭಾಗವಾಗಿ ನಾನು ಶಾಸಕ ಎಂಎಲ್ಸಿ ಆಗಿದ್ದೇನೆ. ನಮ್ಮ ಕ್ಷೇತ್ರದ ಜನರ ರಕ್ಷಣೆಗೆ ನಮ್ಮ ತಂದೆಯ ಅಭಿಮಾನಿಗಳ ರಕ್ಷಣೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಇದು ಕುಟುಂಬ ರಾಜಕಾರಣ ಅಲ್ಲ. ನಮ್ಮ ತಂದೆ ಏನು ನನ್ನನ್ನು ನಮ್ಮ ಪಕ್ಷದ ಅಧ್ಯಕ್ಷ ಮಾಡಿದ್ದಾರಾ? ಮಕ್ಕಳನ್ನೇ ಪಕ್ಷದ ಅಧ್ಯಕ್ಷ ಮಾಡುವುದು, ಮಕ್ಕಳನ್ನೇ ಶಾಸಕ, ಸಂಸದ ಮಾಡುವುದು ಕುಟುಂಬ ರಾಜಕಾರಣ. ನಮ್ಮದು ಕುಟುಂಬ ರಾಜಕಾರಣ ಅಲ್ಲ. ನಮ್ಮ ಅಣ್ಣ ಇರದ ಕಾರಣ ನಾನು ರಾಜಕೀಯಕ್ಕೆ ಬಂದಿದ್ದೇನೆ ಅಷ್ಟೇ ಎನ್ನುವ ಮೂಲಕ ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ.
Laxmi News 24×7