ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದೇ ಪ್ರಧಾನಿಯವರ ರಾಜತಾಂತ್ರಿಕತೆ ಎನ್ನುವಂತಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ರಚನಾತ್ಮಕ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಅವರಿಗೆ ಈ ಐಡಿಯಾ ಎಲ್ಲಿಂದ ಬಂತು ಅಂತ ನನಗೆ ಗೊತ್ತಿಲ್ಲ. ವಿಚಿತ್ರ ಐಡಿಯಾಗಳು ಜನರ ತಲೆಗೆ ಹೋಗುತ್ತವೆ. ಇದು ವಿದೇಶಾಂಗ ನೀತಿ ಅಂತ ಅವರು ಭಾವಿಸುತ್ತಾರೆ ಎಂದು ಹೇಳಿ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡರು. ಆ ಮೂಲಕ, ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಆಗ ದೀಕ್ಷಿತ್ ಮಾತನಾಡಿ, ‘ನಾನು ಮೆಲೋನಿ ಎಂದು ಭಾವಿಸಿ ನೀವು ನನ್ನನ್ನು ಅಪ್ಪಿಕೊಳ್ಳುತ್ತಿರಲಿಲ್ಲವೇ?’ ಎಂದು ಕೇಳಿದರು. ‘ನಾನು ಇನ್ನೂ ಆ ಹಂತವನ್ನು ತಲುಪಿಲ್ಲ’ ಎಂದು ರಾಹುಲ್ ಉತ್ತರಿಸಿದಾಗ ಸಭೆ ನಗೆಗಡಲಲ್ಲಿ ತೇಲಿತು.
ʼವಿದೇಶಾಂಗ ನೀತಿ ಎಂದರೆ ನಾಯಕರನ್ನು ಅಪ್ಪಿಕೊಳ್ಳುವುದು ಎಂಬ ಕಲ್ಪನೆ ಅವರಿಗೆ ಎಲ್ಲಿಂದ ಬಂತು ಎಂದು ನನಗೆ ತಿಳಿದಿಲ್ಲʼ ಎಂದು ರಾಹುಲ್ ಗಾಂಧಿ ಮತ್ತೆ ಪ್ರಧಾನಿಗಳ ವಿರುದ್ಧ ವ್ಯಂಗ್ಯವಾಡಿದರು.
ಇರಾನ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ವಹಿಸುವ ಪಾತ್ರದ ಬಗ್ಗೆ ವಿಪಕ್ಷ ನಾಯಕ ಮಾತನಾಡಿದರು. ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ರಾಜತಾಂತ್ರಿಕ ನಿಲುವಿನ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು.
ಇರಾನ್ ಮೇಲಿನ ಯುದ್ಧ ನಿಲ್ಲಿಸುವ ವಿಚಾರವಾಗಿ ಭಾರತಕ್ಕೆ ಒಂದು ಅವಕಾಶ ಇತ್ತು. ನಾವು ಮುಂದೆ ಬಂದು, ಪ್ರಸ್ತುತರಾಗಬಹುದಿತ್ತು. ಈ ಸ್ನೇಹಗಳನ್ನು ಬಳಸಿಕೊಳ್ಳಬಹುದಿತ್ತು. ಆದರೆ, ನಿಜವಾಗಿ ಏನಾಯಿತು? ಅಂತಹದ್ದೇನೂ ಇಲ್ಲ. ಬದಲಾಗಿ, ಪಾಕಿಸ್ತಾನ ಮಧ್ಯಪ್ರವೇಶಿಸಿ ನಮ್ಮ ಸ್ಥಾನವನ್ನು ಪಡೆದುಕೊಂಡಿತು. ಪಾಕಿಸ್ತಾನ ಮಧ್ಯವರ್ತಿಯಾಯಿತು. ಆದರೆ, ಭಾರತ ಮತ್ತು ಮೋದಿಜಿ ಸುಮ್ಮನೆ ನೋಡುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಚೀನಾದ ಬಗ್ಗೆ ಮಾತನಾಡಿದ ರಾಹುಲ್, ಇತ್ತೀಚಿನ ದಿನಗಳಲ್ಲಿ ನನಗೆ ಮೋದಿಜಿ ಅವರ ಕಚೇರಿಯಿಂದ ನೇರವಾಗಿ ಮಾಹಿತಿ ಬರುತ್ತಿದೆ. ಒಳಗೆ ಪೂರ್ಣ ಪ್ರಮಾಣದ ದಂಗೆ ನಡೆಯುತ್ತಿದೆ. ನಮ್ಮ ಗಸ್ತು ಪ್ರದೇಶಗಳಲ್ಲಿ ನಿರ್ದಿಷ್ಟವಾಗಿ ಅರುಣಾಚಲದಲ್ಲಿ ಚೀನಾ ನಮ್ಮನ್ನು ಗಸ್ತು ತಿರುಗದಂತೆ ನಿರ್ಬಂಧಿಸಿತು. ‘ನೋಡಿ, ಎಲ್ಲವೂ ಚೆನ್ನಾಗಿದೆ. ಇದು ನಿಜಕ್ಕೂ ನಿಮ್ಮ ಭೂಮಿ. ಆದರೆ, ನೀವು ಇಲ್ಲಿ ಗಸ್ತು ತಿರುಗಲು ಸಾಧ್ಯವಿಲ್ಲ’ ಅಂತ ಚೀನಾ ಹೇಳುತ್ತಿದೆ ಎಂದು ಆರೋಪಿಸಿದರು.
Laxmi News 24×7