ಬೆಳಗಾವಿ: ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ನಿಂದ ನಿವೃತ್ತರಾದ ಪಿಂಚಣಿದಾರರಿಗೆ ಸರ್ಕಾರದಿಂದ ಬರಬೇಕಿರುವ ಪರಿಷ್ಕೃತ ಕೈಗಾರಿಕಾ ತುಟ್ಟಿಭತ್ಯೆ ಶೀಘ್ರ ಜಮೆ ಮಾಡುವಂತೆ ಆಗ್ರಹಿಸಿ ನಗರದ ಬಿಎಸ್ಎನ್ಎಲ್ ಕಚೇರಿ ಎದುರು ಗುರುವಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಅಖಿಲ ಭಾರತೀಯ ಬಿಎಸ್ಎನ್ಎಲ್ ಪಿಂಚಣಿದಾರರ ಸಂಘ ಸೇರಿದಂತೆ ಒಟ್ಟು 12 ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಪ್ರಧಾನ ಕಚೇರಿ ಎದುರು ಸೇರಿದ ಪಿಂಚಣಿದಾರರು ತಮ್ಮ ಬೇಡಿಕೆಗಳನ್ನು ಶೀಘ್ರವೇ ಈಡೇರಿಸದೇ ಹೋದಲ್ಲಿ ಏ.30ರಂದು ದೇಶಾದ್ಯಂತ ಎಲ್ಲ ಬಿಎಸ್ಎನ್ಎಲ್ ಕಚೇರಿಗಳ ಎದುರು ಒಂದು ದಿನದ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ಪ್ರತಿ ತ್ರೈಮಾಸಿಕದಲ್ಲಿ ಡಿಪಿಇಯಿಂದ ಕೈಗಾರಿಕಾ ತುಟ್ಟಿಭತ್ಯೆ ಪರಿಷ್ಕರಿಸಲಾಗುತ್ತಿದ್ದು, ಈ ವರ್ಷದ ಜನೆವರಿಯಿಂದ ಅನ್ವಯವಾಗುವಂತೆ ಪರಿಷ್ಕೃತ ದರಗಳನ್ನು ಈಗಾಗಲೇ ಘೋಷಿಸಲಾಗಿದೆ. ಆದರೆ, ಈವರೆಗೂ ಭತ್ಯೆ ಜಮೆ ಮಾಡಿಲ್ಲ. ಈ ಹಿಂದೆ ತಕ್ಷಣ ಜಮೆ ಮತ್ತು ಸ್ವಯಂಚಾಲಿತ ಜಮೆ ಪದ್ಧತಿಯನ್ನು ಬಿಟ್ಟು, ಈಗ ಆಯಾ ಆಡಳಿತಾತ್ಮಕ ಇಲಾಖೆಗಳ ಜವಾಬ್ದಾರಿಗೆ ವಹಿಸಿರುವುದೇ ಈ ವಿಳಂಬಕ್ಕೆ ಕಾರಣವಾಗಿದ್ದು, ಹಳೇ ಪದ್ಧತಿಯಲ್ಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಆರ್.ಬಿ.ತಟಪಟಿ, ಬಿ.ಬಿ.ಅಂಗಡಿ, ಎಸ್.ವಿ.ಪಾಟೀಲ, ಜಿ.ಐ.ದಳವಾಯಿ, ಎಸ್.ಎಸ್.ಸಾರಾಪುರೆ ಇತರರಿದ್ದರು.
Laxmi News 24×7