ಬಾಗಲಕೋಟೆ : ಕಲೆ ಇದ್ದಲ್ಲಿ ವಿಕಾಸ ಇರುತ್ತದೆ. ಸರ್ವವ್ಯಾಪಿಯಾದ ಕಲಾ ಕೌಶಲ್ಯದ ಜೊತೆಗೆ ಸೃಜನಶೀಲತೆ, ಜ್ಞಾನ ಮತ್ತು ಆತ್ಮಸ್ಥೈರ್ಯ ಬೆಳಸಿಕೊಂಡರೆ ಬಯಸಿದಂತಹ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಬಿವಿವಿ ಸಂಘದ ಆಡಳಿತ ಅಧಿಕಾರಿಗಳಾದ ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಆಂತರಿಕ ಗುಣಮಟ್ಟ ಭರವಸೆ ಘಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಾ ಸಿರಿ ಕಾರ್ಯಕ್ರಮವನ್ನು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯೆಯು ಜ್ಞಾನ ಭಂಡಾರವಿದ್ದಂತೆ ಅದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಮಾಜ ಕೊಟ್ಟಿರುವ ಸುಂದರವಾದ ಬದುಕನ್ನು ಮಾದರಿಯಾಗಿಸಿಕೊಳ್ಳಬೇಕು. ಪಠ್ಯಪುಸ್ತಕಗಳ ಜೊತೆಗೆ ಸಾಧಕರ ಜೀವನ ಚರಿತ್ರೆಗಳನ್ನು ಓದಿ. ಇದರಿಂದ ದುರ್ಬಲತೆಯಿಂದ ಹೊರಬಂದು ನಮ್ಮಲ್ಲಿರುವ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಸಾಧ್ಯ. ಜಾಗತಿಕರಣವು ಎಲ್ಲರಿಗೂ ಮುಕ್ತ ಅವಕಾಶ ನೀಡಿದ್ದು ಸರ್ಟಿಫಿಕೇಟ್ ಗಳು ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ ಕೌಶಲ್ಯಗಳಿಗೆ ಅವಕಾಶಗಳಿವೆ. ಭಾರತದ ಯುವ ಶಕ್ತಿಗೆ ವಿಶ್ವದೆಲ್ಲೆಡೆ ಬೇಡಿಕೆ ಇದ್ದು ಆಳವಾದ ಅಧ್ಯಯನ ಮಾಡಿ ದೊಡ್ಡ ಕನಸುಗಳನ್ನು ಇಟ್ಟುಕೊಂಡು ಹೆಜ್ಜೆ ಇಡಿ ಸಾಧಿಸುವ ಆತ್ಮಶಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂದರು.

ಪರಿಶ್ರಮದ ಕೆಲಸ, ವಿದ್ಯೆ ಮತ್ತು ಶಕ್ತಿಗೆ ಸಮಾಜ ತಲೆ ಬಾಗುತ್ತದೆಯೇ ಹೊರತು ಬಾಹ್ಯ ಸೌಂದರ್ಯಕ್ಕೆ ಅಲ್ಲ. ಶಿಕ್ಷಣವೇ ಮಹಾ ಶಕ್ತಿ ಎಂದು ಅಂಬೇಡ್ಕರ್ ಹೇಳಿದ ಮಾತು ಸತ್ಯವಾಗಬೇಕಾದರೆ ಅದರ ಸಾಮರ್ಥ್ಯ ಅರಿತುಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಆರ್ಥಿಕ ಶಕ್ತಿಯ ಆಧಾರದ ಮೇಲೆ ಗೌರವ ನಿರ್ಧಾರವಾಗುತ್ತಿದೆ. ಅದನ್ನು ಪಡೆಯಲು ಇನ್ನೊಬ್ಬರ ಮಾತಿಗೆ ಕಿವಿಗೊಡದೆ ನಿರ್ಧಿಷ್ಟ ಗುರಿ, ಸ್ವಾಭಿಮಾನ ಬೆಳಸಿಕೊಳ್ಳಿ ಹುಡುಗಾಟಿಕೆಯೇ ಬದುಕಲ್ಲ ಎಂದರು
ಪ್ರಾಚಾರ್ಯರಾದ ಎಸ್.ಆರ್ ಮೂಗನೂರಮಠ ಅವರು ಮಾತನಾಡಿ ಕಲೆಯು ಸರ್ವವ್ಯಾಪಿಯಾಗಿದೆ. ನಕ್ಷತ್ರಗಳನ್ನು ಒಟ್ಟುಗೂಡಿಸಿ ರಾಶಿಗಳನ್ನು ನಿರ್ಮಿಸಲು ಕಲೆಯನ್ನು ಬಳಸಿದ್ದು ಇದು ಜಗತ್ತಿಗೆ ಭಾರತೀಯರು ಕೊಟ್ಟ ಕೊಡುಗೆಯಾಗಿದೆ. ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದವರು ಕೂಡ ತಂತ್ರಜ್ಞಾನದ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯ. ವ್ಯಕ್ತಿತ್ವವು ಸಂಸ್ಕಾರ ಮತ್ತು ಸಾಮಾಜಿಕರಣ ಫಲವಾಗಿದೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಮಾಡಬೇಕು. ನಮ್ಮಲ್ಲಿರುವ ಕೀಳರಿಮೆಯ ಭಾವನೆಯನ್ನು ಮೆಟ್ಟಿ ನಿಂತಾಗ ಸಾಧನೆ ಮಾಡಲು ಸಾಧ್ಯ. ಕೆಲಸಕ್ಕೆ ಮೇಲು ಕೀಳು ಎಂಬ ಭೇದವಿಲ್ಲ ನಾವು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇರಬೇಕು ಎಂದರು.

ಗಮನ ಸೆಳೆಸ ವಿದ್ಯಾರ್ಥಿನಿಯರ ಡೊಳ್ಳು ಕುಣಿತ: ಕಲಾಸಿರಿ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿನಿಯರ ಡೊಳ್ಳು ಕುಣಿತ ಮತ್ತು ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಗಮನ ಸೆಳೆದವು. ಮಹಾವಿದ್ಯಾಲಯದ ಮುಖ್ಯದ್ವಾರದಿಂದ ಡೊಳ್ಳು ಭಾರಿಸುತ್ತ ಅತಿಥಿ ಗಣ್ಯರನ್ನು ಕರೆತರಲಾಯಿತು. ದಾರಿಯುದ್ದಕ್ಕೂ ವಿದ್ಯಾರ್ಥಿನಿಯರು ವಿವಿಧ ಡೊಳ್ಳು ಭಾರಿಸುವ ಭಂಗಿಗಳನ್ನು ಪ್ರದರ್ಶನ ಮಾಡಿದರು. ಬಳಿಕ ಮಹಾವಿದ್ಯಾಲಯದ ಮೇಲೆ ಕಲಾಸಿರಿ ಬ್ಯಾನರ್ ಬಿಡುವುದರ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಯ ಸಂಯೋಜಕರಾದ ಡಾ. ಕೆ. ವಿ. ಮಠ, ಐಕ್ಯೂಎಸಿ ಘಟಕದ ಸಂಯೋಜಕರಾದ ಡಾ. ಎ. ಯು. ರಾಠೋಡ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ತಾನಾಜಿ ವಿಭೂತಿ ಮತ್ತು ಗಾಯತ್ರಿ ರಾಠೋಡ ಉಪಸ್ಥಿತರಿದ್ದರು.
Laxmi News 24×7