ಹುಕ್ಕೇರಿ: ವಕೀಲರ ನಡುವೆ ಸೌಹಾರ್ದ ಮತ್ತು ಸಹಕಾರ ಅತ್ಯಗತ್ಯ. ಆ ನಿಟ್ಟಿನಲ್ಲಿ ಹುಕ್ಕೇರಿ ಮತ್ತು ಸಂಕೇಶ್ವರ ನ್ಯಾಯಾಲಯಗಳ ವಕೀಲರು ಒಟ್ಟಾಗಿ ವಕೀಲರ ಸಂಘದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹುಕ್ಕೇರಿ ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಅವರಗೋಳ ಹೇಳಿದರು.
ಸಂಕೇಶ್ವರ ನ್ಯಾಯಾಲಯದ ವಕೀಲರ ಸಂಘದ ಚುನಾವಣೆಯಲ್ಲಿ ಈಚೆಗೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ವಕೀಲರ ಸಂಘದ ಸಭಾಭವನದಲ್ಲಿ ಮಂಗಳವಾರ ಸನ್ಮಾನಿಸಿ ಮಾತನಾಡಿದರು. ವಕೀಲರ ಹಕ್ಕುಗಳ ರಕ್ಷಣೆ ಜತೆಗೆ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಮೀಣ ಭಾಗದ ಜನರಿಗೆ ಉಚಿತ ಕಾನೂನು ನೆರವು ನೀಡುವ ಮೂಲಕ ನ್ಯಾಯಾಲಯ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಹಿರಿಯ ವಕೀಲ ಭೀಮಸೇನ ಬಾಗಿ ಮಾತನಾಡಿದರು. ಸಂಕೇಶ್ವರ ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಪಿ.ಶಿರಗೆ, ಉಪಾಧ್ಯಕ್ಷ
ಎಂ.ಬಿ.ನಂದಿಹಳ್ಳಿ, ಕಾರ್ಯದರ್ಶಿ ಡಿ.ಎಸ್.ನಿಂಗನೂರಿ, ಜಂಟಿ ಕಾರ್ಯದರ್ಶಿ ಆರ್.ಬಿ.ದಡ್ಡಿ, ಮಹಿಳಾ ಪ್ರತಿನಿಧಿ ಎಲ್.ಬಿ.ಬಿಸಕೊಪ್ಪ ಮತ್ತು ಖಜಾಂಚಿ ವೀಣಾ ಕಲಪತ್ರಿ ಅವರನ್ನು ಸನ್ಮಾನಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಶಿವಾನಂದ ಮರಿನಾಯಿಕ, ಕಾರ್ಯದರ್ಶಿ ಎಸ್.ಎಸ್.ಮಗುದುಮ್ಮ, ಸಹಕಾರ್ಯದರ್ಶಿ ಎಸ್.ಎ.ಮಲ್ಲಾಪುರೆ, ಖಜಾಂಚಿ ಶಾಂತಾ ಶೀಲಯ್ಯನವರಮಠ, ಶೋಭಾ ಮಗದುಮ್ಮ, ವಕೀಲರಾದ ಕೆ.ಪಿ.ಶಿರಗಾಂವಕರ, ಮಂಜುನಾಥ ಗಸ್ತಿ ಇತರರಿದ್ದರು.
Laxmi News 24×7