ಬೆಂಗಳೂರು, ಏಪ್ರಿಲ್ 01: ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ತಂಗಿದ್ದ ಆರ್.ಟಿ. ಪಿಜಿಯಲ್ಲಿ ಎಸ್ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ಮಹಜರು ನಡೆಸಿದ್ದಾರೆ. ಸಿಡಿ ಸಂತ್ರಸ್ತ ಲೇಡಿ ತಂಗಿದ್ದ ಪಿಜಿ ಮೇಲೆ ಈ ಹಿಂದೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. 9 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದರು. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಅರೋಪ ಹೊರಿಸಿರುವ ಸಿಡಿಲೇಡಿ ಸಮ್ಮುಖದಲ್ಲಿ ಇದೀಗ ಆಕೆ ತಂಗಿದ್ದ ಪಿಜಿಯಲ್ಲಿ ಮಹಜರು ನಡೆಸಿದರು. ಜತೆಗೆ ಆಕೆ ತಂಗಿದ್ದ ಪಿಜಿ ಮಾಲೀಕನ ಹೇಳಿಕೆಯನ್ನು ಕೂಡ ಎಸ್ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಪಂಚರ ಸಮಕ್ಷಮದಲ್ಲಿ ಹೇಳಿಕೆ: ಕಳೆದ ಮೂರು ದಿನದ ಹಿಂದೆ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ 164 ಅಡಿಯಲ್ಲಿ ಸ್ವ ಇಚ್ಛಾ ಹೇಳಿಕೆ ದಾಖಲಿಸಿರುವ ಸಿಡಿಲೇಡಿಯನ್ನು ಕಳೆದ ಮೂರು ದಿನದಿಂದ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾಧಿಕಾರಿ ಕವಿತಾ ನೇತೃತ್ವದಲ್ಲಿ ಸಿಡಿಲೇಡಿಯ ವಿಚಾರಣೆಯನ್ನು ನಡೆಸಲಾಗುತ್ತಿದೆ. ಐವರು ಸಮಕ್ಷಮದಲ್ಲಿ ಸಿಡಿಲೇಡಿಯ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಎಷ್ಟು ದಿನದಿಂದ ಪಿಜಿಯಲ್ಲಿದ್ದರು. ಯಾರೆಲ್ಲಾ ಪಿಜಿಗೆ ಬಂದು ಹೋಗುತ್ತಿದ್ದರು. ಪಿಜಿಯಲ್ಲಿ ಸಿಕ್ಕಿದ ಹಣದ ಮೂಲದ ಬಗ್ಗೆ ಸಂತ್ರಸ್ತ ಸಿಡಿಲೇಡಿಯನ್ನು ಎಸ್ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಸಿಡಿಲೇಡಿಯ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ಅತ್ಯಾಚಾರ ನಡೆದಿತ್ತು ಎನ್ನಲಾದ ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್ ಪ್ಲಾಟ್ ನಂ. 1075 ನಲ್ಲಿ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಲಿದ್ದಾರೆ ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಸಿಡಿಲೇಡಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಳು. ಎರಡು ಘಟನೆ ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್ ನಲ್ಲಿಯೇ ನಡೆದಿದೆ ಎನ್ನಲಾಗಿದೆ.
ಬಟ್ಟೆ ವಶ: ಇನ್ನು ಸಿಡಿ ಲೇಡಿ ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಂಡಿದ್ದ ಬಟ್ಟೆ, ಹಾಗೂ ಅತ್ಯಾಚಾರ ನಡೆದಿದೆ ಎನ್ನಲಾದ ದಿನ ಧರಿಸಿದ್ದ ಬಟ್ಟೆಗಳನ್ನು ಎಸ್ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಇನ್ನೂ ಕೆಲವು ಮಹತ್ವದ ಸಾಕ್ಷಾಧಾರಗಳು ಸಿಕ್ಕಿವೆ. ಎಲ್ಲ ಸಾಕ್ಷಾಧಾರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಮಂತ್ರಿ ಗ್ರೀನ್ಸ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.